ಶೇಷಾಚಲನಿಲಯನಾಗಿರುತ ಭಕುತರ
ಪೋಷಿಸುತಿಹನ್ಯಾರೆ ಪೇಳಮ್ಮಯ್ಯ ಪ
ದೋಷರಾಸಿಗಳನು ನಾಶ ಮಾಡುತಲಿ
ಶೇಷಸುರಸೇವ್ಯ ಶ್ರೀನಿವಾಸ ಕಾಣಮ್ಮ ಅ.ಪ.
ಕಲಿಯುಗದೊಳು ಪ್ರಜ್ವಲಿಸುತಿರುವೀ ಗಿರಿ-
ಗಿಳಿದು ಬಂದನ್ಯಾಕೆ ಪೇಳಮ್ಮಯ್ಯ
ನಲಿಯುತ ಸ್ತುತಿಪ ಜನರ ಕಲುಷವ ಕಳೆಯಲು
ಒಲಿದು ಬಂದ ದಯದಿಂದಲಿ ಕೇಳಮ್ಮ 1
ಸ್ವಾಮಿ ಪುಷ್ಕರಿಣಿ ತೀರದಿ ನಗುತ ನಿಂದಿಹ
ಕೋಮಲಾಂಗನವನ್ಯಾರೇ ಪೇಳಮ್ಮಯ್ಯ
ಕಾಮಿನಿ ಪದುಮಾವತಿ ತಾ ಮೋಹಿಸುತಲಿ
ಪ್ರೇಮದಿ ವರಿಸಿದ ಭೂಮಿಪ ಕಾಣಮ್ಮ 2
ಬಂಗಾರ ನವರತ್ನ ಮಂಡಿತನಾಗಿ ವಿ
ಹಂಗವೇರ್ದನ್ಯಾರೇ ಪೇಳಮ್ಮಯ್ಯಾ
ಗಂಗಾಜನಕ ಪಾಂಡುರಂಗನೆನಿಪ ಆ
ರಂಗೇಶವಿಠಲನೆ ಇವ ಕಾಣಮ್ಮ 3