(ಮನೆಬಾಗಿಲ ಮೇಲೆ ಶ್ರೀನಿವಾಸ ಮೂರ್ತಿ)
ಮಾಧವ ನಿಧಿಗಿರಿನಾಯಕ
ಪದಕಮಲಾಶ್ರಿತ ಪರುಷಸುಖದಾಯಕ ಪ.
ಬಲಿಯ ದೃಢಕೆ ಮೆಚ್ಚಿ ಬಾಗಿಲ ಕಾಯ್ದನಿ-
ರ್ಮಲ ಕರುಣಾಮೃತ ವಾರಿಧೆ
ಸುಲಭದಿ ಮುಂದಿನ ವಲಭಿತ್ಪದವನು
ಸಲಿಸುತ ನೀನೀ ನಿಲಯದಿ ಸೇರಿದಿ 1
ಮಾಕಳತ್ರ ಮಮತಾನರಮೋಹ ನಿ-
ರಾಕರಿಸಖಿಳ ಸುಖಾಕರನೆ
ಸ್ವೀಕರಿಸೆನ್ನಯ ಸರ್ವ ಸಮರ್ಪಣ
ಬೇಕು ಸರ್ವದಾ ತ್ವಜನ ತರ್ಪಣ 2
ಭೂರಮೇಶ ಗೃಹದ್ವಾರದಿ ನೀ ನೆಲೆ-
ದೋರಲು ದುರಿತವು ಸೇರದಲೆ
ದೂರೋಡುವದೆಂದರಿತು ನಂಬಿದೆನು
ನೀರಜಾರಮಣ ಶೇಷ ಗಿರೀಶ 3