ಎಷ್ಟು ಹೇಳಲಿ ವೆಂಕಟಗಿರಿಯ
ದೃಷ್ಟಿಗೆ ಬಹು ಸಿರಿಯ
ಬೆಟ್ಟವನೆ ಮನಸಿಟ್ಟೇರಲು ಬೇಡಿದ
ಇಷ್ಟಾರ್ಥಗಳ ಈಡಾಡುವ ದೊರೆಯ ಪ
ಚಿತ್ರ ವಿಚಿತ್ರದ ಮಹಾದ್ವಾರ
ಚಿನ್ನದ ಗೋಪುರ
ಸ್ವಚ್ಛವಾದ ಸ್ವಾಮಿ ಪುಷ್ಕರಣಿ ತೀರ
ಸುತ್ತಲು ಪ್ರಾಕಾರ
ಹೆಚ್ಚಿನ ತೀವ್ರತವೆ ಮನೋಹರ
ಮಾರುವ ವಿಸ್ತಾರ
ಚಿತ್ತಜನಯ್ಯನ ಶೈಲವೆ ದೂರದಿಂ-
ದ್ಹತ್ತಿ ಬರುವುದೀತನ ಪರಿವಾರ 1
ಕಟ್ಟಿದ ಉಡಿದಾರ
ಉಟ್ಟಿದ್ದ ನಿರಿಜರಪೀತಾಂಬರ
ಕೌಂಸ್ತುಭ ಮಣಿಹಾರ
ಗಟ್ಟಿ ಕರಕಂಕಣ ಕುಂಡಲಧರ
ಚತುರ್ಭುಜದಲಂಕಾರ
ವಕ್ಷಸ್ಥಳದಲ್ಲಿ ಹೊಂದಿದ ಶ್ರೀ ಮಹಾ-
ಲಕ್ಷ್ಮಿದೇವಿಯರಿಂದೊಲಿವ ಶೃಂಗಾರ 2
ಆಕಾಶರಾಜನ ಕಿರೀಟ
ಚಿತ್ರವು ಬಹುಮಾಟ
ಹಾಕಿದ್ದ ಹರಿ ಕಡೆಗಣ್ಣಿನ ನೋಟ
ಭಕ್ತರ ಕುಣಿದಾಟ
ಭವ ಪಡಿಪಾಟ
ಬಿಡಿಸುವ ಯಮಕಾಟ
ಕೋಟಿ ಜನರ ಓಡ್ಯಾಟವೆ ನಮ್ಮ ಕಿ-
ರೀಟಿಯ ಸಖ ಕೇಶವನ ಮಂದಿರದೊಳ್ 3
ತಪ್ಪುಗಾಣಿಕೆಯ ಬೇಡುವ ಸರ್ಪ
ಶೈಲದ ತಿಮ್ಮಪ್ಪ
ಕಪ್ಪವ ಕಾಸು ಕವಡೆ ಮುಡುಪು
ಹಾಕದೆ ತಾನೊಪ್ಪ
ಜಪ್ಪಿಸಿ ನೋಡುವ ಜನರ ತಪ್ಪ
ಹುಡಿಕ್ಯಾಡುತಲಿಪ್ಪ
ಅಪ್ಪ ಮಹಿಮಾನಂತ ಮೂರುತಿ ತಾ-
ನೊಪ್ಪಿದರೊಲಿದು ಕೊಡುವ ಸಾರೂಪ್ಯ 4
ದೇಶದೇಶದೊಳು ಈತನ ವಾರುತೆಯು
ತುಂಬಿದ ಕೀರುತಿಯು
ಆಸೆಯ ದೈವ ಈ ಮೂರುತಿಯು
ಫಲ್ಗುಣ ಸಾರಥಿಯು
ಲೇಸಾಗಿ ಜನರ ನೋಡುವ ರತಿಯು
ಕರ್ಪುರದಾರತಿಯು
ವಾಸವಾಗಿರುವ ಈ ಶೇಷಾದ್ರಿಯಲಿ ಭೀ-
ಮೇಶ ಕೃಷ್ಣ ಶ್ರೀನಿವಾಸ ಕೃಪಾಳು 5