ನಂಬಿದೆ ನಾಗರಾಜ ಹರಿಯ ಪಾ-
ದಾಂಭೋಜಭಕ್ತಿಭಾಜ ಪ.
ಶಂಭುಶಕ್ರಾದ್ಯರು ಹಂಬಲಿಪರು ನಿನ್ನ
ತುಂಬಿದ ಜೀವಕದಂಬಾಭಿಮಾನಿಯೆ ಅ.ಪ.
ಸಾವಿರ ಜಿಹ್ವೆಯೊಳು ಹರಿಯ ಸ್ತುತಿ
ಗೈವೆ ನಿರತ ಕೃಪಾಳು
ಶ್ರೀವಾಸುದೇವನ ಕರುಣ ನಿನ್ನಲ್ಲೆಷ್ಟು
ದೇವೇಶನಾದರು ಯಾವನು ಬಣ್ಣಿಪ
ಶ್ರೀವಧೂವರನ ಕಮಲಪದ ರಾ-
ಜೀವ ಸೌಂದರ್ಯವನು ತನ್ನಯ
ಸಾವಿರಾಕ್ಷಿಗಳಿಂದ ಕಾಣುತ
ಕೇವಲಾನಂದಾಬ್ಧಿ ಮಗ್ನನೆ 1
ಶಿರವೊಂದರಲಿ ಬ್ರಹ್ಮಾಂಡ ಸಾಸವೆಯಂತೆ
ಧರಿಸಿದೆ ಸುಪ್ರಚಂಡ
ವರ ರಘುರಾಮನಾವರಜ ಲಕ್ಷ್ಮಣನಾದೆ
ಹರಿ ಕೃಷ್ಣರಾಯನ ಪಿರಿಯನಾಗಿ ಅವ-
ತರಿಸಿ ಭೂಭಾರವನುರೆ ಸಂ-
ಹರಿಸಿ ವೇದ ಪುರಾಣ ತತ್ತ್ವವ
ಶರಣಜನರಿಗೆ ಬೋಧಿಸುವ ಮಹಾ
ಕರುಣಿ ಕಮಲಾಕಾಂತನ ಭಕ್ತನೆ 2
ಲಕ್ಷ್ಮೀನಾರಾಯಣನ ನಿದ್ರಾಸ್ಪದ
ರಕ್ಷಿಸು ಕೃಪೆಯಿಂದೆನ್ನ
ಸಾಕ್ಷಾದಚಲರೂಪ ನಿನ್ನೊಳು ನೆಲಸಿದ
ಪಕ್ಷಿವಾಹನ ಜಗದಧ್ಯಕ್ಷ ಶ್ರೀನಿವಾಸ
ಮೋಕ್ಷ ಮಾರ್ಗಪ್ರದರ್ಶಿ ಸತತ ಮು-
ಮುಕ್ಷು ಜನಮನಹರ್ಷ ನಿರ್ಜರ-
ಪಕ್ಷ ಸುಫಲಪ್ರದ ಸದಾ ನಿರ-
ಪೇಕ್ಷ ಗುರುವರ ರಾಕ್ಷಸಾಂತಕ 3