ಗತಿ ಯಾವುದೆನಗೆ ಶ್ರೀಪತಿಯೆ ಪೇಳೊ ಪ
ಪರ ಸತಿಯರನು ಬಯಸುವೆನೊ ಅ.ಪ.
ಕರ ಸೂಚನೆಯ ಮಾಡಿ
ತರುಣಿಯರ ತಕ್ಕೈಸಿ ಸರಸವಾಡಿ
ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ
ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು 1
ನಾಚಿಕಿಲ್ಲದಲೆ ಬಲು ನೀಚರಲ್ಲಿಗೆ ಪೋಗಿ
ಯೂಚಿಸುವೆ ಸನ್ಮಾರ್ಗ ಯೋಚಿಸದಲೆ
ಆ ಚತುರ್ದಶ ವರುಷರಾರಭ್ಯ ಈ ವಿಧದಿ
ಅಚರಿಪೆನೈ ಸವ್ಯ ಸಾಚಿಸಖ ಶ್ರೀ ಕೃಷ್ಣ 2
ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ
ಜ್ಞಾನ ಶೂನ್ಯನು ಆದೆ ದೀನ ಬಂಧು
ಸಾನುರಾಗದಿ ಒಲಿದು ನಾನಾ ಪ್ರಕಾರದಲಿ
ನೀನೆ ಕರುಣಿಸು ಹರಿಯೆ ಜ್ಞಾನಗುಣ ಪರಿಪೂರ್ಣ 3
ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ
ದಾಂಬುಜಕ್ಕೆರಗದಲೆ ಸಂಭ್ರಮದಲಿ
ತಂಬೂರಿಯನು ಪಿಡಿದು ಡಂಭತನದಲಿ ನಾನು
ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ 4
ಪರಮೇಷ್ಟಿಯಾರಭ್ಯ ತ್ರಣಜೀವ ಪರ್ಯಂತ
ತರತಮವ ತಿಳಿಸಿ ತರುವಾಯದಲ್ಲಿ
ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು
ಸಿರಿಜಗನ್ನಾಥ ವಿಠಲ ನಿರುತ ನೀ ಪೊರೆಯದಿರೆ 5