ಮನವೇ ಮರೆವರೇನೊ ಹರಿಯಾ ಪ
ಬಹು ಜನುಮಗಳಲ್ಲಿ ಬಟ್ಟ ಬವಣಿಗಳರಿಯಾ ಅ.ಪ.
ವಿಷಯ ಚಿಂತನೆ ಮಾಡಸಲ್ಲ ಮೇಷ
ವೃಷನನಾದನು ಹಿಂದೆ ಪೌಲೋಮಿ ನಲ್ಲ
ಝಷ ಕೇತುವಿನ ಮ್ಯಾಳ ಹೊಲ್ಲ ನಿರಾ
ಶಿಷನಾಗು ಯಮರಾಯನೆಂದೆಂದೂ ಕೊಲ್ಲ 1
ಧನವೆ ಜೀವನವೆಂಬಿ ನಿನಗೆ ಸುಯೋ
ಧನ ನೋಡು ಧನದಿಂದ ಏನಾದ ಕೊನೆಗೆ
ಅನಿರುದ್ಧ ದೇವನ ಮನೆಗೆ ಪೋಪ
ಘನ ವಿಜ್ಞಾನವನೆ ಸಂಪಾದಿಸು ಕೊನೆಗೆ 2
ಹರಿದಾಸನಾಗಿ ಬಾಳೋ ಗುರು
ಹಿರಿಯರ ಪಾದಕಮಲಕೆ ನೀ ಬೀಳೋ
ನರರ ನಿಂದಾಸ್ತುತಿ ತಾಳೋ ದೇಹ
ಸ್ಥಿರವಲ್ಲ ಸಂಸಾರ ಬಹು ಹೇಯ ಕೇಳೋ 3
ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ
ಮಲ ಪೋಯಿತಲ್ಲದೆ ನಿರ್ಮಲ ಜ್ಞಾನ
ಫಲಿಸದೆಂದಿಗು ಹೀನ ಬುದ್ಧಿ
ಕಳೆದು ಸೇವಿಸು ಸಾಧುಗಳನನುದಿನ 4
ಜಿತವಾಗಿ ಪೇಳುವೆ ಸೊಲ್ಲಾ ಹರಿ
ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲಾ
ಪ್ರತಿಮೆ ಪೂಜಿಸಿದರೇ ನಿಲ್ಲ ಪರೀ
ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲಾ 5
ಜ್ಞಾನೇಚ್ಛಾ ಕ್ರಿಯಾ ಶಕ್ತಿ ತ್ರಯವಾ ತಿಳಿ
ದಾನಂದ ಪಡು ಬಯಸದಿರುಭಯವಾ
ಸಾನುರಾಗದಿ ಬೇಡು ದಯವಾ ನೀ ಮ
ದ್ದಾನೆಯಂದದಿ ಚರಿಸು ಬಿಟ್ಟು ಭಯವಾ 6
ಭಾವ ಕ್ರಿಯಾ ದ್ರವ್ಯಾದ್ವೈತ ತ್ರಯ
ಆವಾಗ ಚಿಂತಿಸು ಭೂಮ್ಯಾದಿ ಭೂತಾ
ಜೀವಿಗಳೊಳು ಜಗನ್ನಾಥ ವಿಠಲ
ಗಾವಾಸ ಯೋಗ್ಯವೆಂದರಿಯೋ ಸಂತತಾ 7