ವೃಂದಾವನ ಪ್ರವೇಶಿಸಿದಂದವ
ಚಂದದಿ ಪೇಳುವೆ ಪಾಲಿಪುದು ಪ
ಇಂದಿರೆಯರಸನ ಪ್ರೇರಣೆಯಿಂದ ಯತಿ
ವೃಂದ ತಿಲಕ ರಾಘವೇಂದ್ರರಾನಂದದಿ ಅ.ಪ
ಒಂದು ದಿನವು ಶ್ರೀ ರಾಯರು ಶಿಷ್ಯರ
ವೃಂದಕೆ ಪಾಠವ ಹೇಳುತಿರೆ
ಅಂದು ವಿಮಾನದಿ ಕೃಷ್ಣದ್ವೈಪಾಯನ ಪ
ರಂಧಾಮಕೈದಲು ನೋಡಿ ಕೈ ಮುಗಿದು 1
ಎಷ್ಟು ದಿನವು ನಾವಿಲ್ಲಿರಬೇಕೆಂದು
ಶಿಷ್ಟ ಗುರುವರರು ಕೇಳಿದೊಡೆ
ಕೃಷ್ಣದ್ವೈಪಾಯನರೆರಡು ಬೆಳಗುಳ
ಗಟ್ಟಿಯಾಗಿ ಬೀಸಿ ತೋರಿಸಿ ಪೊರಟರು 2
ನೆರೆದ ಶಿಷ್ಯರದರರ್ಥವೇನೆನುತ
ಗುರುಗಳನ್ನು ತಾವ್ ಕೇಳಿದೊಡೆ
ಎರೆಡು ವರ್ಷ ತಿಂಗಳು ದಿನವೆರಡೆರಡು
ಇರುವುದು ಧರೆಯೊಳಗೆಂದರು ರಾಯರು 3
ಆದವಾನಿಗೆ ಗುರು ಸಂಚಾರ ಪೋಗಿರೆ
ಆ ದಿವಾನ ವೆಂಕಣ್ಣ ಬಲು
ಆದರಿಸಿದ ಬಳಿ ತಾ ನವಾಬನಿಂದ
ಮೋದದಿ ಕೊಡಿಸಿದ ಮಂಚಾಲೆಯನು 4
ಹಿಂದೆ ಪ್ರಹ್ಲಾದರು ಯಾಗವ ರಚಿಸಿದ
ಸುಂದರ ಕ್ಷೇತ್ರವಿದೆಂಬುದನು
ತಂದು ಮನಕೆ ಗುರುರಾಯರೀ ಕ್ಷೇತ್ರವ
ನಂದು ಪಡೆದು ತಾವಿಲ್ಲಿಯೇ ನಿಂತರು 5
ಉತ್ತಮ ನೀಲವರ್ಣದ ಶಿಲೆಯಪಳಿರಿಸಿ
ಕೆತ್ತಿಸಿ ವೃಂದಾವನತರಿಸಿ
ಕ್ಷೇತ್ರರಕ್ಷಣೆಯಗಷ್ಟ ದಿಕ್ಕುಗಳಲಿ ದೇವ
ಮೂರ್ತಿಗಳನು ಸ್ಥಾಪಿಸಿ ನಿಲಿಸಿದರು 6
ವೃಂದಾವನದಲಿ ಸ್ಥಾಪಿಸಲೇಳ್ನೂರು
ಚಂದದ ಸಾಲಿಗಾಮಗಳ
ತಂದಿಟ್ಟರೆ ಸಿದ್ಧತೆಗಳು ಸಕಲವು
ಕುಂದಿಲ್ಲದಂದೆ ನಡೆದಿರಲಾಗಲೆ 7
ಮುಂದಕೆ ತಮ್ಮ ಸಂಸ್ಥಾನವ ವಹಿಸಿ ಯೋ
ಗೀಂದ್ರರೆಂಬ ಪ್ರಿಯ ಶಿಷ್ಯರಿಗೆ
ಸಂದಿಪ ವಿರಹದಿ ನೊಂದಿದ ಶಿಷ್ಯರ
ವೃಂದವ ಬಲು ಸಂತೈಸಿದರಾಗಲೇ8
ನಲವತ್ತೇಳು ಸಂವತ್ಸರ ನಾಲ್ಕು ತಿಂ
ಗಳು ಇಪ್ಪತ್ತೊಂಭತ್ತು ದಿನಕಾಲ
ನಲವಿನಿಂದ ವೇದಾಂತ ಸಾಮ್ರಾಜ್ಯವ
ಸಲಹಿ ಸುಕೀರ್ತಿಯ ಗಳಿಸಿದ ಬಳಿಕ 9
ಸಾವಿರದೈನೂರು ತೊಂಭತ್ಮೂರನೆ
ಕ್ರತು ಸಂವತ್ಸರದ
ಶ್ರಾವಣ ಕೃಷ್ಣ ದ್ವಿತೀಯದ ಗುರುವಾರ
ವಾಸರ ಮುಹೂರ್ತದಿ ಗುರುವರ 10
ಹಸ್ತದಿ ಜಪಮಾಲೆ ಪಿಡಿದು ಯೋಗೀಂದ್ರರ
ಹಸ್ತಲಾಘವವ ಸ್ವೀಕರಿಸಿ
ಸ್ವಸ್ತಿವಾಚನಗಳ್ ವಿಪ್ರರು ಪೇಳುತಿರೆ
ಅರ್ಥಿಯಲಿ ವೃಂದಾವನವ ಪ್ರವೇಶಿಸಿ 11
ಪದ್ಮಾಸನದಲಿ ಮಂಡಿಸಿ ಎದುರಲಿ
ಮುದ್ದುಪ್ರಾಣೇಶನ ನೋಡುತಲಿ
ಪದ್ಮನಾಭನ ಧ್ಯಾನದೊಳಿರೆ ಜಪಸರ
ಬಿದ್ದು ಬಿಡಲು ಮುಚ್ಚಳಿಕೆಯನಿಡಲು 12
ನೆರೆದಿಹ ವಿಪ್ರರು ಜಯ ಜಯವೆನ್ನುತ
ಪರಿಪರಿ ರಾಯರ ಪೊಗಳಿದರು
ಕರಿಗಿರೀಶನ ಕರುಣ ಪಡೆದ ನಮ್ಮ
ಗುರುಸಾರ್ವಭೌಮನ ಸರಿಯಾರಿಹರು 13