ಯಾರಿಗುಸುರಲಿ ಸಾರತತ್ವ ವಿ
ಚಾರ ಭವದೂರಾ ಪ
ಚಾರು ಸೇರಿ ಮುಕ್ತಿಯ ಸೊರೆವಿಡಿವುದಿನ್ಯಾರಿಗುಸುರಲಿ ಅ.ಪ.
ಶ್ರೀ ಗುರುನಾಥನ ಕಟಾಕ್ಷದಿ
ತ್ಯಾಗಿಸಿ ಸಂಸಾರದ ಗೊಡವೆಯ
ಯೋಗಿಯಂದದೊಳಿದ್ದು
ಆಗಮ ನಿಗಮಾರ್ಥಕೆ ಸಿಲುಕದ
ಯೋಗ ಘನವನೊಳಗೊಂಡಿಹ ಅಂಗದ
ಯೋಗಾನಂದದುಯ್ಯಾಲೆಯ ತೂಗಿ
ನೆಲೆಗೆ ನಿಂದಿಹ ನಿಜಸುಖವಿನ್ಯಾರಿಗುಸುರಲಿ 1
ಉದರದ ನಾಭಿಯ ನೀಳದ ತುದಿ
ಹೃದಯ ವಾರಿಜದೊಳಗಿಪ್ಪ ಶಿವ
ಸದನ ಲಿಂಗವ ಕಂಡು
ಅದು ಇದು ಬೇರ್ಪಡಿಸದೆ ಹೃದಯದಿ
ಚದುರ ಸಾಧು ಸತ್ಪುರುಷರ ಮತದಲಿ
ಮುದದಿ ಮುಕ್ತಿ ಮಾನಿನಿಗೆ ಮಂಗಲ
ಮದುವೆಯಾದ ಮನಸಿನ ಮಹಾ ಗೆಲವಿನ್ಯಾರಿಗುಸುರಲಿ 2
ನೆತ್ತಿಯೊಳ್ ಹೊಳೆ ಹೊಳೆವ ಚಿದಾ
ದಿತ್ಯನ ಪ್ರಕಾಶವ ಕಂಡು
ಚಿತ್ತದಿ ನಲಿದಾಡಿ
ಉತ್ತಮಾನಂದಾತ್ಮರಸ ಸವಿ
ಯುತ್ತ ಚಪ್ಪರಿದು ಶರಣರ
ಮೊತ್ತದೊಡನೆ ಕುಣಿಕುಣಿದು ಬ್ರಹ್ಮನ
ಗೊತ್ತು ತಿಳಿದ ಗುರುತಿನ ವಿಸ್ತರವಿನ್ಯಾರಿಗುಸುರಲಿ 3
ಕುಂದುವ ಕಾಯದ ಸುಖಿಕೆಳೆಸದೆ
ಹೊಂದಿದ ಸರ್ವಾಂಗದ ಶೋಧಿಸಿ
ಒಂದೇ ದೇವನೊಳಾಡಿ
ವಂದಿಸಿ ಗುರುಹಿರಿಯರ ಚರಣಕೆ
ಹೊಂದಿ ಹೊಂದಿ ಓಲಾಡುವ ಅರಿಗಳ
ಬಂದಿಯೊಳಗೆ ಸಿಲುಕದೆ ಬ್ರಹ್ಮಾ
ನಂದರಸಾಮೃತ ಸವಿದಿಹ ಸುಖವಿನ್ಯಾರಿಗುಸುರಲಿ 4
ಹಲವು ಯೋನಿಯೊಳಗೆ ಹೊರಳ
ಕುಲ ಛಲ ಶೀಲವ ಮೂರಡಗಿಸಿ
ಸುಲಭ ವಂಶದೊಳುಂಡು
ಮಲಿನ ಮಾಯಾಮೋಹಕೆ ಸಿಲುಕದೆ
ಬಲೆಯ ಛೇದಿಸಿ ಮುಕ್ತಾಂಜ್ಯದ ಬಗೆ ಇನ್ಯಾರಿಗುಸುರಲಿ 5