ವ್ಯಾಪಾರ ಉದ್ಯೋಗವನು ಮಾಡುವೆ |
ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಪ
ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ |
ಅರವಿಂದನಾಭವೆಂಬೊ ಅಂಗಿಯ ತೊಟ್ಟು ||
ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ |
ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ 1
ಕಮಲನಾಭವೆಂಬೊ ಕಮಲದಾನಿ ಪಿಡಿದು |
ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ ||
ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು
ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ 2
ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು |
ಭಾಗವತರು ಕರೆದು ಇಂಬನಿತ್ತು ||
ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ |
ಈಗಳೆ ಕುಳಿತ ಅಚ್ಯುತನ ತೋರಿದರು 3
ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ |
ಮಂಡಲಾಧಿಪನು ಕರೆದು ಮನ್ನಿಸಿ ||
ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ |
ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು 4
ಘನವಾದ ಉದ್ಯೋಗ ದೊರಕಿತು ನನಗಿನ್ನು |
ಅನುಮಾನವಿಲ್ಲವು ಎಂದೆಂದಿಗೂ ||
ದಿನದಿನಕೆ ಹರಿನಾಮವೆಂಬೊ ಲೆಖ್ಖ-|
ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ || 5
ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ |
ಹರುಷದಿಂದಲಿ ಎನಗೆ ಸಂಬಳಕ್ಕೆ ||
ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ |
ವರಹಗಳು ಎಂದಿಗಾದರು ಅಳಿವಿಲ್ಲದೆ || 6
ಈಸು ದಿನ ಉದ್ಯೋಗ ಹೀನನಾಗಿ ನೊಂದೆ |
ದಾಸರಾ ದಯದಿಂದ ದೊರೆಕಿತಿಂದು ||
ಸಂಚಿತ ಕರ್ಮ ಓಡಿಸಿ |ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ || 7