ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ |
ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ
ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು |
ಕಲಿ ಬಂದು ಹಿತ್ತಿಲನ್ನೀಗ ಬಳಿವಾ ||
ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ |
ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1
ಕರಡಿ ಕರು ಆಗುವದು ಉರಿ ಮಂಜು ಆಗುವದು |
ಕರಿ ನಾಯಿ ಆಗುವದು ಕಂಡವರಿಗೆ ||
ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು |
ನರಹರಿಯ ನಾಮಗಳ ನಂಬಿ ಪಠಿಪರಿಗೆ 2
ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ
ಕ್ಷಣದೊಳಗೆ ಪೋದಂತೆ ಕಾಣಿಸುವದು ||
ಘನ ಪಾಷಾಣಗಳು ತೃಣ ಸಮವು ಯೆನಿಸುವವು
ವನಜಾಕ್ಷನ ಕೃಪೆಯ ಪಡದ ದಾಸರಿಗೆ 3
ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು |
ಪದೇ ಪದೆಗೆ ರೋಗಗಳು ಬೆನ್ನಟ್ಟವು ||
ಉದಯಾಸ್ತಮಾನವೆಂಬೋ ಭಯವು ಸುಳಿಯದು |
ಪದುಮನಾಭನ ಕೃಪೆಯ ಪಡೆದ ದಾಸರಿಗೆ4
ಬಾರವು ಭಯಗಳು ಬಂದರು ನಿಲ್ಲವು |
ಹಾರಿ ಹೋಗುವವು ದಶದಿಶಗಳಿಗೆ ||
ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ |
ಸೇರಿದಾ ಜನರಿಗೆ ಇನಿತಾಹುದುಂಟೇ 5