ತನುವೆನ್ನದು ಚೇತನವೆನ್ನದು ಎಂದು
ಅನುದಿನ ಪೋಷಣೆಯನು ಮಾಡಿದೆ ಹರಿ ಪ
ಚಿನುಮಯ ನಿನ್ನನು ನೆನೆವೆನೆಂದರೆ ಮನ
ತನುಮಧ್ಯೆಯರ ತನುವಿನೊಳಿರುತಿಹುದು
ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ
ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ1
ಚರಣದ ಪೂಜೆಯೊಳಿರುವೆನೆಂದರೆ
ಕರವರೆಡು ಕೋಮಲೆಯರನರಸುವುವು
ಹರಿಕಥಾಶ್ರವಣದೊಳಿರೆ ಈ ಕಿವಿಗಳು
ಹರಿಣಾಕ್ಷಿಯರ ಕಂಠಸ್ವರಕೆ ಮೋಹಿಪವಯ್ಯ 2
ದುರಿತದೂರನ ನಾಮ ಸ್ಮರಿಸದು ನಾಲಿಗೆ
ಸರಸಿಜಾಕ್ಷಿಯರೊಳು ಸರಸೋಕ್ತಿ ಪಡೆದು
ಚರಣಶ್ರೀತುಳಸಿಯನರಿಯದೆ ನಾಸಿಕ
ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ 3
ನಿನ್ನಂಘ್ರಿಗೆರಗದೆ ಕುನ್ನಿಶರೀರವಿ
ದುನ್ನುತಸ್ತನವುಳ್ಳ ಕನ್ನೆಯರೊಳ್
ತನ್ನ ಸುರತಸುಖವನೆ ಚಿಂತಿಸುವದು
ಎನ್ನಾಧೀನದೊಳಿಲ್ಲ ನೀನೆ ಬಲ್ಲೆ 4
ಎರವಿನ ಸಿರಿಯಂತೆ ಕರಣಕಳೇವರ
ಬರಿದೆ ನನ್ನದು ಎಂದು ಮೆರೆದೆ ನಾನು
ಹರಿ ನಿನ್ನದೇ ಸರಿ ದುರಿತಸುಕೃತಕೆನ್ನ
ಗುರಿಮಾಡದೆ ಕಾಯೋ ವರದವಿಠಲ ಕೃಷ್ಣ 5