ಆನಂದಮಯನಾದೆ ನಾನು ದಿವ್ಯ
ಜ್ಞಾನಾಮೃತವನುಂಡು ಪೇಳಲಿನ್ನೇನು ಪ
ಶರೀರ ಭ್ರಾಂತಿಗಳನೆಲ್ಲ ಕಳೆದು ಕರ್ಮ
ದುರಿತ ಸಂಸಾರ ಆಶಾಪಾಶವಳಿದು
ನರನೊಳಗೆ ನರನಾಗಿ ಸುಳಿದು ಸರ್ವ
ಪರಿಪೂರ್ಣ ಭರಿತ ತಾನೆಂಬುದು ತಿಳಿದು 1
ಗುರುಕಟಾಕ್ಷದ ನೆಲೆ ನೋಡಿ ತಿರುಗಿ
ಬರುವ ಹೋಗುವ ಭ್ರಮೆಗಳನೀಡಾಡಿ
ಶರಣರ ಸ್ತೋಮದಿ ಕೂಡಿ ಭವ
ಶರಧಿಯ ದಾಟಿ ಹಂಸಾತ್ಮಕನೊಳಾಡಿ ಆನಂದ 2
ಗುರುಚರಣಗಳ ಧ್ಯಾನಿಸುತಾ ಒಡನೆ
ಎರಕವಾದಂತೆ ಬೇರೂರಿತು ಚಿತ್ತಾ
ವರವಿಮಲಾನಂದ ಗುರುದತ್ತಾತ್ತೇಯನ
ಕರುಣಾಸಮುದ್ರದೊಳ್ಬೆರೆದು ನಲಿವುತ್ತಾ ಆನಂದ 3