ಪಂಪಾಪುರಾಧಿಪ ಶ್ರೀ ವಿರೂಪಾಕ್ಷ ನೀ ಪಾಲಿಪುದೆಮ್ಮನು ಪ
ಶ್ವೇತ ಭಾಪುರೆ ಸುರಕುಲ ದೀಪ ಸದಾಶಿವ
ಪಾದ ಸಮೀಪದ ಸೇವಕ ಅ.ಪ.
ಹರಿಪಾದೋದಕ ಶಿರದಲಿ ಧರಿಸಿದ
ಹರಿಕಥಾಮೃತ ಮಳೆಗರೆವೆ ನೀ
ಕರುಣಿ ಸಂಕರುಷಣನ ಚರಣಾಬ್ಜ ಧೂಳಿ ಶ-
ರೀರ ಲೇಪನದಿಂದ ವರ ತೇಜಯುತನೆ
ಮುರಹರಗೆರಗದ ನರನಿಗೆ ನರಕವು
ಸ್ಥಿರವೆಂದು ಸುರವರ ಭೇರಿ ಭೋರಿಡುತಿರೆ
ನಿರುತ ಅವನ ಪದ ಮೆರೆಯದೆ ಮನಗೊಂಡೆ
ಶರಣು ಅಮರನುತ ಗುರು ಶಿರೋಮಣಿಯೆ1
ದೇಶಕ್ಕೆ ದಕ್ಷಿಣ ಕಾಳಿಯೆನಿಸುವ ವಿ-
ಶೇಷ ಸ್ಥಳದೊಳು ವಾಸವಾಗಿ ಅ-
ದೋಷನಾಶನ ಸಂತೋಷದಿ ಗಿರಿಜೆಗೆ
ಶ್ರೀಶನ ಮಂತ್ರೋಪದೇಶವ ಮಾಡಿದೆ
ದಾಶರಥಿಯ ನಿಜದಾಸರೆನಿಸುವರ
ಪೋಷಿಪೆ ಶಿವ ಪರಮೇಶ ಕೃಪಾಳೊ 2
ಕಂದುಗೊರಳ ಜೀಯ ಸಿಂಧೂರ ಮೊಗನಯ್ಯ
ಕಂದರ್ಪಹರ ಭಕ್ತಬಾಂಧವ ಕಾಯೊ
ಇಂದಿರೆರಮಣ ಗೋವಿಂದನ ಪಾದಾರ-
ವಿಂದ ಭೃಂಗನೆ ಭವದಿಂದ ಕಡೆಗೆ ಮಾಡೊ
ನಂದಿವಾಹನ ಎನ್ನ ಹಿಂದಣ ಕಲುಷಿತ
ವೃಂದಗಳೋಡಿಸುವ ಇಂದುಧರ ಅರ-
ಸಿರಿ ವಿಜಯವಿಠ್ಠಲನಕುಂದದೆ ಭಜಿಪ ಆನಂದವ ಕರುಣಿಸು 3