ಜಲಜನಾಭನ ಪೂಜೆ ಅತಿ ಸುಲಭವು ಪ
ಚಲಿಸಿದ ಮನವನ್ನು ಪೊಂದಿರುವ ಸುಜನರಿಗೆ ಅ.ಪ
ತಾಳ ಕೇಳುವನಲ್ಲ ಮೇಳ ಕೇಳುವನಲ್ಲ
ಬಾಳೆ ಮಾವುಗಳ ವೈಭವವ ಕೇಳುವನಲ್ಲ
ಸೂಳೆಯಂದದಿ ಬಹಳ ನಟನೆಗಳು ಬೇಕಿಲ್ಲ
ಬಾಲಕೃಷ್ಣನಲಿ ದೃಢಭಕುತಿಯುಳ್ಳವಗೆ 1
ನವರತ್ನ ಮಂಟಪದ ಝವೆಯ ಬಯಸುವನಲ್ಲ
ಹವಳಗಳ ಸರದ ವೈಭವವು ಬೇಕಿಲ್ಲ
ಧವಳ ಮುಕ್ತಾಹಾರಗಳ ಬಯಸುವನಲ್ಲ
ಭುವನ ಭೂಷಣನೊಳತಿ ಭಕುತಿಯುಳ್ಳವಗೆ 2
ಹೊನ್ನಿನಾಭರಣಗಳನ್ನು ಬಯಸನು ವಿವಿಧ
ಅನ್ನಗಳ ರುಚಿಗೆ ಲೋಭವ ಪೊಂದನು
ಅನ್ನಾದಿಮಯ ಹರಿಯು ತನ್ನಲ್ಲಿ ತುಳಸೀದಳ
ವನ್ನು ಭಕುತಿಯೊಳಿಡೆ ಪ್ರಸನ್ನನಾಗುವನು 3