ಕೈಯ ಬಿಡದಿರೋ ನಾರಾಯಣ
ಜೀಯಾ ಕಾಯೆಂದು ಶರಣುಬಂದೆನ್ನ ಪ
ಲೋಕದಂತೆ ನಡೆಯಲೆನುತ
ಬೇಕಾದುದಿಲ್ಲವೆಂದು ತೊಳಲಿ
ಶೋಕಸಾಗರದೊಳಗೆ ಮುಳುಗಿ
ಶ್ರೀಕಾಂತ ನಿನ್ನ ಕಾಣಬೇಕೆಂಬೆನ್ನ 1
ಹೊಟ್ಟೆ ಬಟ್ಟೆಗಳಿಗೆ ದುಡಿಯ
ಲೆಷ್ಟೆ ಕಷ್ಟಪಟ್ಟು ಬಳಲಿ
ಸೃಷ್ಟಿಪಾಲಕ ಬಾಯಬಿಡುತ
ಇಷ್ಟದೈವವ ಸೇರಬೇಕೆಂಬೆನ್ನ 2
ಆಶೆಯೆಂಬ ಪಾಶವೆನ್ನ
ಮೋಸದಿಂದ ಬಂಧಿಸಿಹುದು
ಲೇಸಕಾಣೆನು ಜಾಜೀಕೇಶವ
ಪೋಷಿಸೆಂದು ಮರೆಯಹೊಕ್ಕೆನ್ನ 3