ಜಯ ಜಯ ಭೀಮಶ್ಯಾಮಾ ಜಯ ಸತ್ಯಾವರ ಪ್ರೇಮಾ
ಜಯ ಕೃಷ್ಣಾಗತ ಕಾಮಾ ಜಯ ಪುಣ್ಯನಾಮಾ ಪ.
ಪಂಚಬಾಣನ ಜನಕ ಪಾಂಚಾಲೆಯನು ಕರೆದು
ಪಂಚ ಮೂರುತಿಗರಿಸಿನವ ಹಚ್ಚೆನಲೂ
ಪಂಚರತ್ನಗಳಿಂದ ಮಿಂಚುತ ಭಾವಿ ವಿ-
ರಿಂಚಿಯ ಕಡೆಗಾಗಿ ನಡೆತಂದಳಾಗ 1
ಅಣಿಮಾದಿ ಗುಣ ಚಿಂತಾಮಣಿಯ ಹತ್ತಿರೆ ಬಂದು
ಮಣಿದು ಪಾದಕೆ ನಾರಿಮಣಿ ನಸುನಗುತಾ
ಝಣಝಣವೆನಿಪ ಕಂಕಣ ಶೋಭಿತದಿಂದ
ಪುನುಗಿನೆಣ್ಣೆಯ ಕೂಡಿದರಿಶಿಣ ಹಚ್ಚಿದಳು 2
ಕ್ಷತ್ರಿಯ ಗಣ ಶಿರೋರತ್ನನಾಗಿರುವಿ ಸ-
ರ್ವತ್ರ ವ್ಯಾಪಕ ಫಾಲನೇತ್ರ ವಂದಿತನೆ
ಕೃತ್ರಿಮ ದ್ವಿಜ ಭಿಕ್ಷಾ ಪಾತ್ರ ಸಲ್ಲದು ಕಂಜ
ಪತ್ರ ತೋರಿದರೆ ನಾನರಿಶಿಣ ಹಚ್ಚುವೆನು 3
ಖುಲ್ಲ ಬಕಗೆ ಭಂಡಿಯಲ್ಲಿ ತುಂಬಿದ ನಾನಾ
ಪಲ್ಯ ಭಕ್ಷಗಳ ಮೇಲೆ ಚೆಲ್ಲಿದನ್ನವನು
ಎಲ್ಲ ಉಂಡಸುರನ ನಿಲ್ಲದಂತೊರಸಿದ
ಮಲ್ಲ ನಿನ್ನಯ ದಿವ್ಯ ಗಲ್ಲವ ತೋರೊ 4
ಅಂಗಸಂಗದಿ ಶತಶೃಂಗಗಿರಿಯನೊಡದ
ಮಂಗಳಮೂರ್ತಿ ಮಾತಂಗ ವೈರಿಗಳ
ಭಂಗಿಸಿ ಬಲುಹಿಂದ ರಂಗನರ್ತನ ಗೈವ
ಶೃಂಗಾರ ಕರಗಳಿಗರಸಿನ ಹಚ್ಚುವೆನು 5
ಮುಂದೆ ಕೀಚಕಬಾಧೆಯಿಂದ ರಕ್ಷಿಸುವಿ ಸೌ
ಗಂಧಿ ಕುಸುಮವನ್ನು ತಂದು ಮುಡಿಸುವಿ
ಮಂದಮತಿಯ ಕುರುನಂದ ನರನು ಬೇಗ
ಕೊಂದು ಮನ್ಮನಸಿಗಾನಂದ ಪಾಲಿಸುವಿ 6
ಕುಂಡಲೀ ಗಿರೀಶ ಬ್ರಹ್ಮಾಂಡ ನಾಯಕ ಹೃ-
ನ್ಮಂಡಲದೊಳಗಿಟ್ಟುಕೊಂಡು ಸಂತಸದಿ
ಚಂಡ ವೈರಿಗಳನ್ನು ಖಂಡಿಸಿ ಸುಖದಿಂದ
ಶುಂಡಾಲ ಪುರವಾಳಿಕೊಂಡು ನೀನಿರುವಿ7