ಯಾರಿಗೆ ದೂರುವೆನು ಗಿರಿಯ ರಾಯ
ಯಾರೆನ್ನ ಸಲಹುವರು ಪ
ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ
ವಾರಿಜವನು ತೋರಿ ಕಾರುಣ್ಯವೆನಗೀಯೊ ಅ.ಪ
ಕಷ್ಟ ಜನ್ಮದಿ ಬಂದೆನು ಧಾರುಣಿಯೊಳು
ದುಷ್ಟರಿಂದಲೆ ನೊಂದೆನು
ನಿಷ್ಟುರ ಬೇಡವೊ ನಿನ್ನ ನಂಬಿದ ಮೇಲೆ
ಸೃಷ್ಟಿಪಾಲಕ ಎನ್ನ ಬಿಟ್ಟು ಕಳೆಯಬೇಡ 1
ಹಿಂದೆ ಮಾಡಿದ ಕರ್ಮವು ಈ ಭವದೊಳು
ಮುಂದಾಗಿ ತೋರುತಿದೆ
ಇಂದಿಲ್ಲ ಗತಿಯದರಿಂದ ನೊಂದೆನು ನಾನು
ಮಂದರಧರ ಗೋವಿಂದ ನೀನಲ್ಲದೆ 2
ಹಗಲುಗತ್ತಲೆ ಸುತ್ತಿಯೆ ಕಂಗೆಡಿಸುತ್ತ
ಹಗೆಯೊಳು ನಗಿಸುತಿದೆ
ಉಗುರಿನಸಿಗಿಗೆ ಮಚ್ಚುಗಳೀಗ ನಾಟ್ಯವು
ಸೊಗಸು ಹಾರಿಸಿ ಎದೆ ದಿಗಿಲುಗೊಳಿಸುತಿದೆ 3
ಬಾಡಿದ ಅರಳಿಯನು ಕಲ್ಲೀನ ಮೇಲೆ
ಈಡಾಗಿ ನಟ್ಟಿದರೆ
ಬೇಡಿಕೊಂಡರೆ ತಳಿರ್ಮೂಡಿ ಬರುವುದುಂಟೆ
ರೂಢಿಗೊಡೆಯ ನೀನು ನೋಡದಿದ್ದರೆ ಮೇಲೆ 4
ಹಲವು ಪರಿಯ ಕಷ್ಟವ ನಿನ್ನಯ ಪದ
ಜಲಜದ ಕರುಣದಲಿ
ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲ
ಒಲವಾಗೆನ್ನೊಳು (ವರಾಹತಿಮ್ಮಪ್ಪ)15