ಶ್ರೀಶನ ಚರಣದಾಸನಾಗಿರ್ದರೆ
ಆಶಾಪಾಶ ನೀಗಿರಬೇಕು ಪ
ಈಶನರಿತ ಗುರು ಶಿಷ್ಯನಾಗಿರ್ದರೆ
ದೂಷಣ ಭೂಷಣ್ಹೋಗಿರಬೇಕು ಅ.ಪ
ಹರಿಸರ್ಮಣಾಮೃತ ಸುರಿವನಾಗಿರ್ದರೆ
ಧರೆಯ ಭೋಗ ಮೀರಿರಬೇಕು
ಪರತತ್ತ್ವದ ಮೂಲರಿತವನಾದರೆ
ಮರವೆ ಮಾಯ ಹಾರಿರಬೇಕು 1
ವೇದ ವೇದಾಂತವ ಸಾಧಕನಾದರೆ
ವಾದ ವಾಂಛಲ್ಯವ ತೊಡೆದಿರಬೇಕು
ಬೋಧ ಪಡೆದು ನಿಜ ಸಾಧುವಾದರೆ
ನಾದಶಬ್ದವಡಗಿರಬೇಕು 2
ಮಾನಸಪೂಜೆಯ ಖೂನ ಬಲ್ಲ್ಯಾದರೆ
ತಾನು ತನ್ನನು ಅರಿತಿರಬೇಕು
ಧ್ಯಾನವಿಡಿದು ನಿಜಜ್ಞಾನಿಯಾದರೆ
ಮಾನಭಿಮಾನಕ್ಹೊರತಿರಬೇಕು 3
ಬೋಗದ್ವಾಸನ್ಹಿಂಗಿ ಭಾಗವತನಾದರೆ
ಕೂಗಿನ ನೆಲೆ ತಿಳಿದಿರಬೇಕು
ಯೋಗ ಬಲಿಸಿ ಮಹಯೋಗಿಯಾದರೆ
ರಾಗರಹಿತನಾಗಿರಬೇಕು 4
ಲಿಂಗವ ಧರಿಸಿ ಜಂಗಮನಾದರೆ
ಸಂಗರಹಿತನಾಗಿರಬೇಕು
ಅಂಗ ಮೂರು ನೀಗಿ ಲಿಂಗ ತಾನಾದರೆ
ಲಿಂಗಾಂಗ ಸಮರಸ ತೋರಬೇಕು 5
ಸತ್ಯವರಿತು ಸತ್ಪುರುಷನಾದರೆ
ಸತ್ತಂತೆ ಜಗದೊಳಿರಬೇಕು
ಮೃತ್ಯುಗೆಲಿದು ಪರಮಾರ್ಥಿಕನಾದರೆ
ಮತ್ರ್ಯರ ಗುಣ ಮರ್ತಿರಬೇಕು 6
ಘೋರ ಭವಾಂಬುಧಿ ಪಾರುಗಂಡಿರ್ದರೆ
ಪಾರ ಹಾರೈಕೆ ಅಳೆದಿರಬೇಕು
ಸಾರಮೋಕ್ಷ ತನ್ನ ಸೇರಬೇಕಾದರೆ
ಧೀರ ಶ್ರೀರಾಮನೊಲಿಸಿರಬೇಕು 7