ಅನ್ಯ ದೇವರ ನಾನರಿಯೆ ಸಿರಿಹರಿಯೆ ಪ
ಎನ್ನ ಬಿನ್ನಪ ಕೇಳಯ್ಯ ದೊರೆಯೆ ಅ.ಪ
ಹರಬೊಮ್ಮಾದಿಗಳಿಂದ ವರಪಡೆದ ರಾವಣ
ಸರುವ ಲೋಕಂಗಳನೆಲ್ಲ ಗೆಲಿದು ಬಂದು
ಸಿರಿರಮಣನೆ ನಿನ್ನೊಳು ದ್ವೇಷವನೆ ಮಾಡಿ
ತರು ಮೃಗಗಳಿಂದಪರಾಜಿತನಾದನಯ್ಯಾ 1
ದೃಷ್ಟಾಂತಗಳನ್ನೆಷ್ಟು ತೋರಲಿ ನಾನು
ದುಷ್ಟ ಜನರೆಲ್ಲ ಪಟ್ಟ ಬವಣೆಗಳಿಗೆ
ಶ್ರಿಷ್ಟಿಗೊಡೆಯನೆ ನಾ ಮನಮುಟ್ಟಿ ನುತಿಸುವೆ
ಶಿಷ್ಟ ಜನರ ಸಂಗದೊಳಿಟ್ಟೆನ್ನ ಸಲಹಯ್ಯಾ 2
ಮೂರು ಕರಣಗಳಿಂದ ನಾ ನಿನ್ನ ನಂಬಿಹೆನು
ಮಾರುತೀಶನೆ ನಿನ್ನ ಚರಣವ ತೋರಿ
ಗಾರು ಮಾಡದೆ ನೀ ಸಲಹಬೇಕೆಂಬೆನು
ಕಾರುಣ್ಯದಿಂದಲಿ ಶ್ರೀ ರಂಗೇಶವಿಠಲ 3