ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ಪ
ವಸುದೇವಾತ್ಮಜನಾದ ಕೇಶವ ದೇವಕಿ
ಬಸುರೊಳಗುದಿಸಿದ ನಾರಾಯಣನು
ಎಸೆದು ನಿಂದನು ಗೋಕುಲದೊಳು ಮಾಧವ
ಕುಸುಮನಾಭನು ಗೋವಿಂದ ನಂದ ನಂದನಕಂದ 1
ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು
ತೊಟ್ಟಿಲ ಶಿಶುವಾಗಿ ಮಧುಸೂದನ
ಮೆಟ್ಟಿ ಕೊಂದನು ತ್ರಿವಿಕ್ರಮ ಶಕಟನ
ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ 2
ಬೆಣ್ಣೆಯ ಮೆದ್ದನು ಮಿಣ್ಣನೆ ಶ್ರೀಧರ
ಕಣ್ಣಿಯ ಕರುವನು ಹೃಷಿಕೇಶನು
ಉಣ್ಣಬಿಟ್ಟನು ತಾಯ ಮೊಲೆಯ ಪದ್ಮನಾಭ
ಸಣ್ಣವ ಕ್ಷಣದೊಳು ದಾಮೋದರನಾದ 3
ವಾಸುದೇವನು ದ್ವಾರಾವತಿವಾಸನೆನಿಸಿದ
ಸಾಸಿರ ನಾಮನು ಸಂಕರುಷಣನು
ಆಸುರವಾಗಿಯೆ ಪ್ರದ್ಯುಮ್ನನೆಸೆದನು
ದೋಷರಹಿತನಾದ ಅನಿರುದ್ಧನು 4
ಉತ್ತಮನಾಗಿ ಪುರುಷೋತ್ತಮನೆಸೆದನು
ಅಧೋಕ್ಷಜ ನಾಮದಿ
ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ
ಮುಕ್ತಿದಾಯಕನಾದನಚ್ಯುತ ನಾಮದಿ 5
ಕಡಲ ನಡುವೆ ಜನಾರ್ದನನೆನಿಸಿ ತಾನು
ಹಡಗನು ಸೇರಿಯೆ ಬಂದನುಪೇಂದ್ರನು
ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ
ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ 6
ಇಪ್ಪತ್ತು ನಾಲ್ಕು ನಾಮದ ಸ್ವಾಮಿಯು
ತಪ್ಪದೆ ಒಂಬತ್ತು ಪೂಜೆಯಗೊಂಬನು
ವರಾಹ ತಿಮ್ಮಪ್ಪರಾಯನು
ಒಪ್ಪುಗೊಂಡನು ಮಧ್ವರಾಯನಾಗಮದೊಳು 7