ಬತ್ತಿಗೆ ಹತ್ತದ ಜ್ಯೋತಿಯು ನಡು
ನೆತ್ತಿಯೊಳಿಂ ಬಿಟ್ಟು ಜತನ ಮಾಡಣ್ಣಾ ಪ
ತೈಲ್ಯವು ಸರಿಯಾಗದು ನೋಡು ಅಶುದ್ಧ
ಮೈಲಿಗೆಯಿದ್ದರೆ ಕಳದೀತು
ಕೈಲಾಸಪತಿಯ ಧ್ಯಾನವ ಮಾಡು ಬಟ್ಟ
ಬೈಲಲ್ಲಿ ಬೆಳಗಾಗುತಿದೆ ಮುಂದೆ ನೋಡು 1
ಕತ್ತಲೆ ಬೆಳಕಲ್ಲಿ ಉಳಿಯದು ಮಾಯಾ
ಮೃತ್ಯುಪಾಶಗಳಲ್ಲಿ ಸುಳಿಯದು
ನಿತ್ಯ ನಿರ್ಮಲವೆಂಬ ಗೆಲವದು ಪರ
ವಸ್ತುವಿನೊಳಗೆ ಕೂಡಿರುವುದು ಅಣ್ಣಾ 2
ನಿಂದಿಹ ನಿಜಕೆ ತಾ ನಿಲುವದು ಪರ
ದ್ವಂದ್ವಾಕಾರಗಳೆಲ್ಲ ಗೆಲುವದು
ಕುಂದು ದುಷ್ಕರ್ಮವ ಕೊಲುವದು ವಿಮಲಾ
ನಂದನ ಚರಣಕೆ ಸಲುವದು ಅಣ್ಣಾ 3