ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ |
ವಾಸುದೇವ ಮುನಿಯಿದ್ದ ಕಾರಣ ಪ
ರಾಜಧಾನಿಯ ನೋಡೆ ಇಂದ್ರಭವನಕೆ ಮೇಲು |
ತೇಜದಲಿ ನೋಡೆ ಸೂರ್ಯನದೆ ಸೋಲು ||
ಪೂಜೆದಲಿ ನೋಡೆ ಸರ್ವ ಧರಣಿಗೆ ಮೇಲು |
ಭೋಜನದಲಿ ನೋಡೆ ಅಮೃತಕೆ ಮೇಲು 1
ಉತ್ಸಾಹದಲಿ ನೋಡೆ ನಹಿ ಪ್ರತಿ ನಹಿ ಪ್ರತಿ |
ಸತ್ಸಂಗತಿಯ ನೋಡೆ ಬುಧ ಸಂಗತಿ ||
ಸುಚರಿತೆಯ ನೋಡೆ ಶುದ್ಧ ಸತ್ವದ ನೀತಿ |
ಮತ್ಸರ ಮೆರೆದು ನೋಡೆ ಇಲ್ಲೆ ಮುಕುತಿ 2
ಓಲಗದಲಿ ನೋಡೆ ಸತ್ಯಲೋಕಕೆ ಸಮ |
ಪೇಳುವ ಕೀರ್ತನೆ ನೋಡು ವೇದಸ್ತೋಮ ||
ಬಾಲ ಉಡುಪಿಯ ಕೃಷ್ಣ ವಿಜಯವಿಠ್ಠಲರೇಯನ |
ತಿಳಿದ ಮಾನವಗೆ ಫಲವು ನಿಷ್ಕಾಮಾ3