ಯಾರ ಭಯವೇನಿಹುದು ಶ್ರೀವೇಂಕಟೇಶ
ನೀನೆ ದಯವಾದ ಮೇಲ್ಯಾರ ಹಂಗೇನು ಪ
ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು
ಅಡವಿಯೊಳು ಮೃಗಬಂದು ತಡೆದರೇನು
ತೊಡೆಯನೇರುವ ಮಗನ ಅಡವಿಗಟ್ಟಿದರೇನು
ನೆಗಳು ಕಾಲ್ಪಿಡಿದರೇನು 1
ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು
ಕಾಳ ರಾಕ್ಷಸ ಕೈಯ ಪಿಡಿದರೇನು
ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು
ಹಗೆ ತನಗೆ ವಿಷವಿಕ್ಕಲೇನು 2
ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು
ರಾಗದೊಳು ಬಲವಂತ ಕರೆಯಲಾಗಿ
ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ
ಆಗ ಬಿಡಿಸಿದವರಾರು ನಾಗಗಿರಿವಾಸ 3
ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು
ಒಡೆಯ ರಕ್ಷಿಸುಯೆಂದು ನಡುಗುತಿರಲು
ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ
ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4
ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು
ಸಡಗರದ ಮಡದಿಯಳ ಮಾತ ಕೇಳಿ
ಒಡೆಯ ನೀನೆಯೆಂದು ಕಡುತಪವನರ್ಚಿಸಲು
ಉಡುಗಣಕೆ ಮೇಲಾದ ಪದವ ತೋರಿದೆಲಾ 5
ಮೃಗ ಜಲದ ಹೊಂಡದೊಳಗಾಡುತಿರೆ
ಕಂಡು ಕಡು ರೋಷದಲಿ ಕಾಲ್ಪಿಡಿಯಲು
ಪುಂಡರಿಕಾಕ್ಷನನು ಭಯಗೊಂಡು ಕರೆದರೆ
ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6
ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ
ಹೆಬ್ಬಾವು ಆತನನು ಮೈಸುತ್ತಲು
ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು
ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7
ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ
ಭರದಿಂದ ಕಂಬದೊಳು ಹೊರಟು ಬಂದು
ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ
ತರಳನನು ಕಾಯಿದವರಾರು ಶ್ರೀಹರಿಯೆ 8
ಉರಿಯ ಮನೆಯಂದರಿಯದರಸರೈವರ ಹೊಗಲು
ಇರಿಸಿರ್ದ ಬಾಗಿಲೊಳು ಉರಿ ಮುಸುಕಲು
ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು
ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9
ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು
ತಂದೆ ಬರೆದಿಹ ಲಿಖಿತ ನಂದನನು ನೋಡಿ
ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ
ನಂದಳಿದ ಮಾಯವೇನೆಂದು ಹೇಳಯ್ಯ 10
ಕಾಯ ಭಯ ಹೊರತಾಗಿ
ಮೀರಿದಾಪತ್ತಿನಲಿ ಕಡೆ ಸೇರಿಸೊ
ಭೂರಮಣ ವರಾಹತಿಮ್ಮಪ್ಪ ಚರಣವನು
ಕುಲಿಶ ನೀನಾಗು 11