ಡಂಕವ ಸಾರಿದನೋ ಯಮ ತನ್ನ ನಗರದಿ
ಘಂಟೆಯ ನುಡಿಸಿದನು ಪ
ಡಂಕಸಾರಿದ ತನ್ನ ತುಂಟದೂತರಿಗ್ವೊ
ಯ್ಕುಂಠನ ದಾಸರ ತಂಟೆಯು ಬೇಡೆಂದು ಅ.ಪ
ಕಾಲಕಾಲದಿ ಹರಿಯಕಥೆ ಕೀರ್ತ
ನಾಲಿಸುವರ ನೆರೆಯು
ತಾಳದಮ್ಮಡಿ ಸಮ್ಮೇಳದೊಡನೆ ಆ
ನೀಲಶ್ಯಾಮನ ಭಜಿಪರಾಳಿನಾಳನುಕಂಡು
ಕಾಲನಾಲುಗಳೆಂದ್ಹೇಳದೆ ಬನ್ನಿರೆಂದು 1
ಮಂದಿರಂಗಳದಿ ವೃಂದಾವನ
ದಂದ ಕಂಡಾಕ್ಷಣದಿ
ಸಿಂಧುಶಯನ ಬಂಧುಭಕ್ತರ
ಮಂದಿರವಿದೆಂದು ಹಿಂದಕ್ಕೆ ನೋಡದೆ
ಸಂದ್ಹಿಡಿದೋಡಿ ಪುರ ಬಂದು ಸೇರಿರೆಂದು 2
ಪರರಂಗನೆಯರ ಸ್ಮರಿಸುವ
ಪರಮ ನೀಚರನ್ನು
ನರಹರಿ ಸ್ಮರಣೆಯ ಅರಿಯದ ಆಧಮರ
ಕರುಣಿಸದೆ ತುಸುಮುರಿದು ಮುಸುಕಿಕಟ್ಟಿ
ದರದರನೆಳೆತಂದು ಉರಿಯೊಳ್ಪೊಯಿರೆಂದು 3
ಪರದ್ರವ್ಯವಪಹರಿಸಿ ಲಂಚದಿಂದ
ಸರುವ ತನ್ನದೆನಿಸಿ
ನಿರುತ ಮಡದಿಮಕ್ಕಳೊರೆವ ದುರಾತ್ಮನರ
ಗುರುತಳನೆಳತಂದು ಕರಿಗಿದಸೀಸಬಾಯೊಳ್
ವೆರಸಿ ಜನಕಕೊಂಡದುರುಳಿಸಿಬಿಡಿರೆಂದು 4
ವೇಣು ಕರದಿ ಪಿಡಿದು ಬಾಣಾರಿ
ಧ್ಯಾನದೊಳಗೆ ಬರೆದು
ಜಾನಕೀಶನ ಲೀಲೆ ಗಾನದಿಂ ಪಾಡುತ
ಆನಂದಿಪ ಮಹಜ್ಞಾನಿಗಳನು ಕಂಡು
ಕಾಣದಂತೆ ಸಿಕ್ಕ ಜಾಣ್ಣುಡಿದೋಡಿರೆಂದು 5
ಇಂದಿರೇಶನದಿನದಿ ಅನ್ನವನು
ತಿಂದ ಮೂಢರ ಭರದಿ
ತಂದು ಒದೆದು ಮಹಗಂಧಮದು
ರ್ಗಂಧನಾರುವ ಮಲತಿಂದು ಬದುಕಿರೆಲೊ
ಎಂದು ಮನೆಹೊರಗಿನ ಮಂದಿರದಿಡಿರೆಂದು 6
ವಿಮಲ ತುಳಸೀಮಣಿಯ ಧರಿಸಿ
ಅಮಿತ ಮಹಿಮನ ಚರಿಯ
ವಿಮಲಮನಸರಾಗಿ ಕ್ರಮದಿ ಬರುವ ಶ್ರೀ
ರಾಮದಾಸರ ಪಾದಕಮಲಗಳನು ಕಂಡು
ಯಮದೂತರೆನ್ನದೆ ನಮಿಸಿ ಬನ್ನಿರೆಂದು 7