ತಂದೆ ನೀನೆಂದು ನಾ ಬಂದೆ ರಕ್ಷಿಸೆಂದೆ ಪ
ಮುಂದೆನ್ನ ಸಲಹುವ ಭಾರವು ನಿಂದೆ ಅ.ಪ.
ಮಾತು ಮಾತಿಗೆ ನಾ ನಿನ್ನ ನೆನೆವೆ ಸ್ಮರಿಸುತಿರುವೆ
ಜ್ಞಾತಿ ಬಾಂಧವರ ಮತ್ಸರ ಮರೆವೆ
ಮಾತಾಪಿತರುಗಳ ಸೇವೆಗೈವೆ
ಈ ತನು ನಿನ್ನ ಚರಣಕರ್ಪಿಸಿರುವೆ 1
ಸಾಧನವೇನೆಂಬುದ ನಾನರಿಯೆ ಕೇಳೊ ದೊರೆಯೆ
ಮಾಧವ ನಿನ ನಾಮವೆಂದಿಗೂ ಮರೆಯೆ
ವೇದಬಾಹಿರರೊಡನಾಡಿ ಮೆರೆಯೆ
ಕಾದುಕೋಯೆನ್ನನೆಂಬೆನು ಶ್ರೀಹರಿಯೆ 2
ನಾ ನಿನ್ನ ಕಾಡಿ ಬೇಡುವುದಿಲ್ಲ ದೂರುವನಲ್ಲ
ಜ್ಞಾನ ಮಾತುರವಿತ್ತು ಕಾಯಬೇಕಲ್ಲ
ನೀ ನನ್ನ ಸಲಹೊ ಲಕ್ಷ್ಮೀ ನಲ್ಲ
ಶ್ರೀನಿವಾಸ ರಂಗೇಶವಿಠಲ 3