ಭಕ್ತಿ ಪಾಶದಿ ಕಟ್ಟುತ ಹರಿಯನು
ನಿತ್ಯದಲಿರು ಮನವೇ ಪ.
ಭಕ್ತಿಗೆ ಮೆಚ್ಚುತ ಅಚ್ಚುತ ತಾನೆ ಬಹ
ನಿಶ್ಚಯವಿದು ಮನವೆ ಅ.ಪ.
ಅನುದಿನ ನಾರಾಯಣನೆಂದಣುಗಗೆ
ಕ್ಷಣದಿ ಕಂಬದಿ ಬಂದ ದನುಜನ ಮುರಿದ
ಗುಣನಿಧಿಯನು ನೀ ಕ್ಷಣ
ಬಿಡದನುದಿನ ನೆನೆ ಮನವೇ 1
ಕಲ್ಲಾಗಿದ್ದಹಲ್ಲೆ ಪೊರೆದು ಶಿವ
ಬಿಲ್ಲ ಮುರಿದ ರಾಮನ ನಲ್ಲೆ
ಕುಬ್ಜೆಯ ಡೊಂಕನೆ ತಿದ್ದಿದ
ಖುಲ್ಲ ಕಂಸನ ಗೆದ್ದಾ ಕೃಷ್ಣನ 2
ಅಂಬರೀಷ ದ್ವಾದಶಿ ವ್ರತವನು ಮಾಡೆ ಮುನಿ
ಪುಂಗವ ಜರಿಯುತಿರೆ
ರಂಗನ ಚಕ್ರದಿಂದ್ಹುಟ್ಟಿದನರಿಯ ದೇವ ಈ
ಅಂಗ ಭಂಗರಕೆ ಚಾಟಿ ಶ್ರೀ ಶ್ರೀನಿವಾಸನು 3