ಸ್ಮರಿಸಿರೊ ನಮ್ಮ ನರನ ಸಾರಥಿಯ
ಪರಿಹರಿಸುವನು ತಾಪತ್ರಯ ವ್ಯಥೆಯ ಪ.
ರಣಮಂಡಲದಲ್ಲಿ ಗುಣಗುವ ಕುಂತಿಯ
ತನುಜನ ನೋಡುತ ವಿನಯದಿಂದ
ಘನತತ್ವವನು ಪೇಳಿ ಅಣುಮಹದ್ಗತ ವಿಶ್ವ-
ತನುವ ತೋರಿದ ಸತ್ಯ ವಿನಯ ಶ್ರೀ ಕೃಷ್ಣನ 1
ಸುರನದೀ ತನುಜನ ಶರದಿಂದ ರಕ್ತವ
ಸುರಿವಂದ ತೋರಿ ಶ್ರೀಕರ ಚಕ್ರವ
ಧರಿಸಿ ಓಡುತ ತನ್ನ ಚರಣ ಸೇವಕನೆಂಬ
ಹರುಷ ತಾಳಿ ಬೇಗ ತಿರುಗಿ ಬಂದವನ 2
ವಿಜಯ ಸಾರಥಿಯಂದು ಭಜಿಸುವ ದಾಸರ
ವಿಜಯ ಪೊಂದಿಸುವನಂಡಜ ರಾಜಗಮನ
ಅಜ ಭವವರದ ಕಂಬುಜನಾಭ ಕಮಲೇಶ
ಭುಜಗ ಧರಾಧೀಶ ಭಜನೀಯಪಾದನ 3