ಭೇದವ ಮರೆಸಿದ ನಮ್ಮಯ್ಯ ಸು
ಸಾಧನ ತಿಳಿಸಿದ ಪ
ಭೇದ ಮರೆಸುತ ವಾದನೀಗಿಸಿ ಪರ
ಸಾಧನದ ನಿಜಹಾದಿಗೆ ಹಚ್ಚಿದ ಅ.ಪ
ಮಂದಮತಿಯ ತರಿದ ಎನ್ನಯ ಭವ
ಬಂಧ ಪರಿಹರಿಸಿದ
ಕುಂದುವ ಜಗಮಾಯದಂದುಗ ಗೆಲಿಸಿದ
ಕಂದನೆಂದುದ್ಧಾರಗೈದ ತಂದೆ ಸಿಂಧುಶಾಯಿ 1
ಜ್ಞಾನಕೆ ಹಚ್ಚಿದ ಎನ್ನದೆ ನಿಜ
ಧ್ಯಾನವ ಪಾಲಿಸಿದ
ನಾನಾಯೋನಿಯೊಳು ಜನಿಸಿ ಜನಿಸಿ ಬಹ
ಹಾನಿಯಿಂದುಳಿಸಿದ ದಾನವಕುಲಹರ 2
ಏನೆಂದು ಬಣ್ಣಿಸಲಿ ನಮ್ಮಯ್ಯನ
ಆನಂದದ ಕೀಲಿ
ತಾನೆ ಒಲಿದಿತ್ತೆನ್ನಗಾನಂದಮಯಾಂಬುಧಿ
ದೀನಜನಾಪ್ತ ಮಮಪ್ರಾಣ ಶ್ರೀರಾಮಯ್ಯ 3