ಕೃಷ್ಣಚಿತ್ತ ಕೃಷ್ಣಚಿತ್ತ ಕೃಷ್ಣಚಿತ್ತ ಎನ್ನಿರೊ ಪ.
ಕೃಷ್ಣಧ್ಯಾನದಿಂದ ಪರಮ ತುಷ್ಟರಾಗಿ ಸುಖದುಃಖ
ಕಷ್ಟ ಕರ್ಮಂಗಳು ಎಲ್ಲ ಅಷ್ಟು ಹರಿಯಾಧೀನವೆಂದು ಅ.ಪ.
ಜನನವಾದ ಕಾಲದಿಂದ
ಇನಿತು ಪರ್ಯಂಕಾರದಲ್ಲಿ
ಅನುಭವಿಸಿದಂಥ ಕರ್ಮ
ಗುಣನಿಧಿಯಾಧೀನವೆಂದು1
ಕಷ್ಟದಲ್ಲಿ ಕಳೆದ ಕಾಲ
ಅಷ್ಟರಲ್ಲೆ ಪಟ್ಟ ಸುಖ
ಕೊಟ್ಟ ಹರಿಯು ಎನಗೆ ಎನುತ
ಕೆಟ್ಟ ವಿಷಯ ಮನಕೆ ತರದೆ 2
ಕಾಮ ಕ್ರೊಧ ಲೋಭ ಮೋಹ
ಆ ಮಹಾ ಮದ ಮತ್ಸರಗಳು
ಕಾಮಿಸಿ ಮನ ಕೆಡಿಸುತಿರಲು
ಶ್ರೀ ಮನೋಹರನಾಟವೆಂದು 3
ಪೊಂದಿದಂಥ ಮನುಜರಿಂದ
ಕುಂದು ನಿಂದೆ ಒದಗುತಿರಲು
ಇಂದಿರೇಶನ ಕರುಣವೆಂದು
ಒಂದು ಮನಕೆ ತಾರದಂತೆ 4
ಮಾನ ಅಪಮಾನಗಳು
ದೀನನಾಥನಧೀನವೆಂದು
ಜ್ಞಾನಿಗಳ ವಾಕ್ಯ ನೆನೆದು
ಮಾನಸದ ದುಃಖ ಕಳೆದು 5
ಹೊಟ್ಟೆ ಬಟ್ಟೆಗೊದಗುವಂಥ
ಅಷ್ಟು ಕಷ್ಟ ಸುಖಗಳೆಲ್ಲ
ವಿಷ್ಣುಮೂರ್ತಿ ಕೊಟ್ಟನೆಂದು
ಮುಟ್ಟಿ ಮನದಿ ಹರಿಯ ಪದವ 6
ಹರಿಯ ಧ್ಯಾನ ಮಾಡುವುದು
ಹರಿಯ ಧ್ಯಾನ ಅರಿಯುವುದು
ಮೂರ್ತಿ ಕಾಣುವುದು
ಹರಿಯಧೀನವೆಂದು ತಿಳಿದು 7
ಗುರುಕೃಪೆಯಿಂ ದತ್ತವಾದ
ವರ ಸುಜ್ಞಾನವರೆಯ ತಿಳಿದು
ಹರುಷ ಕ್ಲೇಶಾ ಮನಕೆ ತರದೆ
ಮೂರ್ತಿ ಮನಕೆ ತಂದು 8
ನಿಷ್ಟೆಯಿಂ ಗೋಪಾಲ
ಕೃಷ್ಣವಿಠ್ಠಲಾಧೀನ ಜಗವು
ಇಟ್ಟ ಹಾಗೆ ಇರುವೆನೆಂದು
ಗಟ್ಟಿಮನದಿ ಹರಿಯ ಪೊಂದಿ 9