ಕೇಳು ಕಲ್ಮಷಹಾರಿ ಕರುಣಾವಾರುಧಿ ಶೌರಿ
ತಾಳು ಕ್ಷಮೆಯ ಕೃಪೆದೋರಿ
ಕೇಳು ಸಂಸೃತಿ ದುಃಖ ತಾಳಲಾರೆನು ಮಾತ
ನಾಲಿಸು ಮಲ್ಲಕಂಸಾರಿ ಪ.
ಮೂರೊಂದು ಎಂಬತ್ತು ಲಕ್ಷ ಯೋನಿಗಳನ್ನು
ಸಾರಿ ಕಡೆಗೆ ಮಾನುಷ್ಯವನು
ಸೇರಿದೆನಿದಿರಲಿ ಷಡ್ವೈರಿ ಗಣವೆನ್ನ
ಗಾರು ಮಾಡುವುದನೇನೆಂಬೆ 1
ದೂರಾಪುರದ ಕಾಮ ವಾರುಧಿವಳಗೀಸ
ಲಾರದೆ ಬಾಯಬಿಟ್ಟೊರವೆ
ಕ್ಷೀರಾಬ್ಧಿಶಯನ ಥಟ್ಟನೆ ಬಂದು ಸಲಹೊ ಮು-
ರಾರಿ ನೀನ್ಯಾಕೆನ್ನ ಮರೆವೆ 2
ಬುದ್ಧಿ ಬರುವ ಮೊದಲಿದ್ದ ಪರಿಯು ಮಣ್ಣ
ಮುದ್ದೆಯಂತಾಯ್ತನಂತರದಿ
ಹದ್ದಿನಂದದಿ ಹಂಗಿನನ್ನವ ಕಾಯುತ್ತ
ಇದ್ದೆನು ಪರರ ಮಂದಿರದಿ 3
ಮಧ್ಯವಯಸ್ಸಿನೊಳ್ ಮದನನ ¨ಲೆಯೊಳು
ಬಿದ್ದು ಹೊರಳಿ ಬಹು ಬಳಲಿ
ಮಧ್ವವಲ್ಲಭ ನಿನ್ನ ಮರೆತೆನು ಮುಂದಾದ-
ರುದ್ಧರಿಸೆನ್ನ ಬೇಗದಲಿ 4
ನೇಮವ್ರತಗಳನೊಂದಾದರು ಮಾಡದೆ
ಕಾಮಲಾಲಸನಾದೆ ಬರಿದೆ
ವ್ಯಾಮೋಹ ಕಡಲಿಗೆ ಕೊನೆಗಾಣೆ ಕಾರುಣ್ಯ
ಧಾಮನ ಬಿಡೆ ನಿನ್ನ ಸ್ಮರಣೆ 5
ಸಾಮಜೋದ್ಧಾರ ಸಕಲಸುರವೈರಿ ನಿ-
ರ್ನಾಮವತಾರ ಭೂಧಾರ
ನಿತ್ಯ ಸವಿದು ಬಾಳುವ ಮುಖ್ಯ
ಕಾಮಿತಾರ್ಥವ ನೀಡು ವರದಾ 6
ಸುರಮುನಿ ಪಿತೃಋಣ ಭರವ ನೀಗುವ ಮೂರು
ಕಾಲ ಕಳೆದೆ
ವರ ದೇವಾಲಯ ಕೂಪಾ ರಾಮಯಜ್ಞಾದಿ ಸ-
ತ್ಕರಗಳ ವಾರ್ತೆಯ ತೊರೆದೆ 7
ಗುರು ಹಿರಿಯರ ಸೇವೆ ಮರೆತು ಮನಸಿನಲ್ಲಿ
ಸರಿಯಲ್ಲ ಎನಗೆಂದು ತಿಳಿದೆ
ಮರಿಯಾದೆ ಗೆಟ್ಟು ಮಾಯಾತಂತು ಬಂಧದೊ-
ಳಿರುವೆ ಈ ಪರಿಯಿನ್ನು ಥರವೆ 8
ಲೋಕನಾಯಕ ನಿನ್ನ ಸ್ಮರಣೆ ಒಂದಿದ್ದರೆ
ಸಾಕೆಂಬ ಶ್ರುತಿ ಪುರಾಣಗಳು
ವಾಕಾನುವಾಕುಗಳು ಸುರಿದ ಸರ್ವಜ್ಞ
ಶ್ರೀಕರ ಪಾದದ ಮತವ 9
ಸ್ವೀಕರಿಸುತ ನಿನ್ನ ಸೇವೆ ಮಾಡಲು ಬ್ಯಾರಿ-
ನ್ಯಾಕಿನ್ನು ಡಾಂಭಿಕರ
ವ್ಯಾಕುಲವ ಬಿಡಿಸಿ ವೆಂಕಟನಾಥ ಕರುಣಿಸ
ಬೇಕು ಶ್ರೀವರ ನಿನ್ನ ಪಥವಾ 10