ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಇದೆ ಇದೆ ಉಡುಪಿಪುರ ನಮ್ಮ ಪದುಮನಾಭನು ನೆಲೆಸಿರುವ ಮಂದಿರ ಪ. ಬಂದ ಆಯಾಸಗಳೊಂದು ಕಾಣಿಸದಿನ್ನು ಸಿಂಧು ತಡಿಯಲಿಪ್ಪ ಪಟ್ಟಣ ನೋಡೆ ಸುಂದರ ಗೋಪುರ ಅಂದವಾಗಿಹ ಬೀದಿ ಬಂದೆವೆ ಗುರು ಹಿರಿಯರ ಕೃಪೆಯಿಂದ 1 ಮೊದಲೆ ತೋರುವುದು ಶ್ರೀ ರಾಘವೇಂದ್ರ ಮಠ ಅದರ ಬದಿಯಲ್ಲೆ ಕೃಷ್ಣಪುರ ಮಠವು ಅದರೆದರಲ್ಲೆ ಶಿರೂರು ಶ್ರೀಗಳ ಮಠ ಎದುರೆ ಕಾಣುವುದೆ ಕನಕ ಮಂಟಪವು 2 ಕಿಂಡಿಯಲ್ಲಿ ನೋಡಿ ಪುಂಡರಿಕಾಕ್ಷನ ಕಂಡು ವಂದಿಸಿ ಮಹಾದ್ವಾರಕೆ ಬನ್ನಿ ಮಂಡೆ ಬಾಗಿಸಿ ಬನ್ನಿ ಮಹಾಪ್ರದಕ್ಷಿಣಿಗಾಗಿ ಕಂಡು ಸಾಗಿರಿ ಮುಂದೆ ಕಾಣೂರು ಮಠವ 3 ಎರಡನೆಯ ಬೀದಿಯಲಿ ಬಲದ ಮಹಾದ್ವಾರ ಗಿರಿಜೆಯರಸ ಚಂದ್ರೇಶ್ವರನ ಗುಡಿ ಎರಗಿ ಮುಂದ್ವರಿಯೆ ಎಡದಲ್ಲಿ ಸೋದೆಯ ಮಠ ಅ ದರ ಪಕ್ಕವೆ ಪುತ್ತಿಗೆ ಮಠ ನೋಡಿ 4 ಬರಬರುತ ಬೀದಿ ಎರಡು ಪಕ್ಕಗಳಲ್ಲಿ ಇರುವ ಅಂಗಡಿ ಸಾಲು ವ್ಯಾಸಾದಿ ಮಠಗಳ್ ನಿರರುತಿ ಕೋಣದಿ ಆದಮಾರು ಮಠ ಅ ದರ ಪಕ್ಕವೆ ಪೇಜಾವರ ಮಠವೆನ್ನಿ 5 ಮುಂದೆ ಒಂದೆರಡ್ಹೆಜ್ಜೆಯಿಂದ ಬರಲು ಅಲ್ಲಿ ಸುಂದರವಾದ ಪಲಿಮಾರು ಮಠ ಅಂದ ನೋಡುತ ಸಾಗಲರ್ಧ ಪ್ರಥಮ ಬೀದಿಯಿಂದ ಬಲಗಡೆ ತಿರುಗೆ ಅನಂತೇಶ್ವರ 6 ಚತುರ ಬೀದಿಯ ಮಧ್ಯೆ ರಾಜಿಸುತಿಹ ಗುಡಿ ಅತಿ ಉನ್ನತವಾದ ಗರುಡಸ್ಥಂಭ ಪ್ರಥಮ ಪ್ರದಕ್ಷಿಣೆ ದ್ವಾರ ದರ್ಶನಗಳು ಗತಿಸಿ ಪೋದುವು ನಮ್ಮ ಪಾಪರಾಶಿಗಳು 7 ನಡೆಯಿರಿ ನಡೆಯಿರಿ ಕೃಷ್ಣನ ಮಠದೆಡೆ ಬಡಿಯುತಲಿಹರು ನಗಾರಿಗಳು ತಡೆಯದೆ ತೆಗೆವರು ಮಹಾದ್ವಾರವೀಗಲೆ ಒಡೆಯ ಕೃಷ್ಣನ ನೋಡ ಬಲ್ಲಿರೆಲ್ಲ 8 ಬೆಳಗು ಝಾವದ ನಾಲ್ಕು ತಾಸಿನ ಭೇರಿಯು ಒಳಗೆ ಪೋಗಿರಿ ಎಂದು ಕೂಗುತಿದೆ ಬಲು ಬೇಗ ಸ್ನಾನ ಮಾಡುತ ಮಧ್ವಸರಸಿನೋಳ್ ಚಲುವ ಕೃಷ್ಣನ ನೋಡ ಬನ್ನಿರೆಲ್ಲ 9 ಮುನಿವರರೆದ್ದು ಸ್ನಾನವಗೈದು ಉಷಃಕಾಲ ಘನಪೂಜೆಗೈದು ಪೊಂಗಲು ದೋಸೆಯ ಮುನಿವರದಗೆ ನೈವೇದ್ಯವರ್ಪಿಸಿ ತಮ್ಮ ಮನದಣಿಸುತ್ತಲಾನಂದಿಪರು 10 ಬಾಲತೊಡಿಗೆಯನಿಟ್ಟ ಬಾಲರೂಪನ ನೋಡಿ ನೀಲಮೇಘಶ್ಯಾಮ ನಿರ್ಮಲಾತ್ಮ ಆಲಯದೆಡಬಲ ಗರುಡ ಮುಖ್ಯಪ್ರಾಣ ಓಲೈಸೆ ಗೋಪಾಲಕೃಷ್ಣವಿಠಲನ 11
--------------
ಅಂಬಾಬಾಯಿ
ಅಂಗನೆ | ನಮ್ಮ ರಂಗನೆ | ಮುನಿದನ್ಯಾತಕೆ ಪ್ರಾಣಲಿಂಗನೆ ಪ ನಿಜವಾದ ವಾಜಿಯ ಮಾಜುತ ಪೇಳಲು |ಸೋಜಿಗ ಮಾಡಲು ಮಂಗನೇನೆ ? 1 ಕೊಳಲನೂದಲು ಬಳಲದೆ ಮನವಿಟ್ಟು |ಕೇಳಲು ಮರುಳ ಕುರಂಗನೇನೆ ? 2 ಬಿಡದೆ ರಮಣಿಯನ್ನು ಎಡದಲ್ಲಿ ಬಿಡುವನು |ಮಡದಿ ಮಾರ್ಗದೊಳು ಹಂಗವೇನೆ ? 3 ಕೈಯಲ್ಲಿ ನೆರೆಯದೆ ಮೈಯಲ್ಲಿ ತೋರದೆ |ಸುಯ್ಯಲು ಬಿಡಲು ಭುಜಂಗನೇನೆ ? 4 ತಕ್ಕಾದ ನುಡಿಯನು ರುಕ್ಮೇಶನಾಡದೆ |ಅಕ್ಕ ಮಿಕ್ಕದ ವಿಹಂಗನೇನೆ ? 5
--------------
ರುಕ್ಮಾಂಗದರು
ಆಳ್ವಾರ್-ಆಚಾರ್ಯ ಸ್ತುತಿಗಳು ನೀರಾಟವ ನೋಡಿದೆ ನೀರಜಾಕ್ಷನ ರಾಣಿ ಗೋದಾದೇವಿಯ ಪ ಶ್ರೀವಿಲ್ಲಿಪುತ್ತೂರ ಶ್ರೀತುಳಸಿವನದಲ್ಲಿ ಶ್ರೀವಿಷ್ಣುಚಿತ್ತರಾ ಪುತ್ರಿಯೆಂದೆನಿಸಿ ಸುಪುತ್ರಿಯೆಂದೆನಿಸಿ ಶ್ರೀ ದೇವಿ ತಾನುದಿಸೆ ಬೇಗ ತೀವ್ರ ಹರುಷದಿಂ ಬೆಳೆಯುತ್ತಲಿದ್ದಾಳಲು 1 ಪುತ್ರಿಗೆ ತಕ್ಕಂಥ ವರವಿಲ್ಲವೆನುತಾಲೆ ಚಿತ್ತದೊಳಗೆ ಯೋಚಿಸಿದ ಆಳ್ವಾರರು ಪೆರಿಯಾಳ್ವರರು ಭಕ್ತವತ್ಸಲನಾ ವರಿಸಬೇಕೆನುತಾನೆ ಅರ್ಥಿಯಿಂದಲೆ ನೀರಾಟವನೆನೆದಾಳು 2 ಶ್ರೀಶವಾಸನೆಗಳ ಭಾವಿಸೀ | ಗೊಲ್ಲ ವಾಸನೆಗಳ ಭಾವಿಸೀ ವಾಸುದೇವನಾ ವರಿಸಬೇಕೆನುತಾಲೆ ಉ ಲ್ಲಾಸದಿಂದಲೆ ಹೆಂಗಳ ಕೂಡೆ ಪೊರಟಾಳು 3 ಮುತ್ತು ಮಾಣಿಕದಾಭರಣವನಿಟ್ಟು ಸುತ್ತೆಣೆ ಗಂಟನ್ಹಾಕಿ ದೇವಿ ಸುತ್ತೆಣೆ ಗಂಟನ್ಹಾಕಿ ಉತ್ತಮನಾಗಿದ್ದ ಪುಷ್ಪಗಳನೆ ಮುಡಿದು ಚಿತ್ತದೊಳೊಲ್ಲಭನಪ್ಪಣೆಗೊಂಡು ಪೊರಟಾಳು 4 ಮಾರ್ಗಶಿರ ಮಾಸದಿ ಪೊತ್ತೊಂದು ದಿವಸಾದಿ ಬೇಗ ತಾ ಪೊರಟೂ ಮಹಾಲಕ್ಷಿ ತಾ ಪೊರಟ ಳಾಗ ಬೀದಿಯನು ಸುತ್ತಿ ಮಂಟಪದಲಿ ನಿಂದು ಮಂಗಳಾರತಿಯನೆತ್ತೀ ಮಾರು ವಸ್ತ್ರವ ತೆಗದಾರು 5 ದಂತಧಾವನ ಮಾಡಿ ಕಂತುಪಿತನರಸೀಗೆ ಅಂತರಂಗದ ಭಕ್ತರು ಬೇಗ ಅಂತರಂಗದ ಭಕ್ತರು ಸಂತೋಷದಿಂದಲೆ ಮುಖವನ್ನು ತೊಳೆದು ಶ್ರೀ ಕಾಂತಗೆ ವಸ್ತ್ರದಿಂ ಮುಖವನೊರೆಸಿದಾರು 6 ಭಾಪು ಛತ್ರಿಚಾಮರ ಸೂರೆಪಾನವಾ ಜನ ಬೀಸಿ ಗೋಪಿ ಮುಕ್ತಿದಾಯಕಿಗಾಗ ಮುಕ್ತಿದಾಯಕಿಗಾಗ ದರ್ಪಣವನು ತೋರಿ ಕಂದರ್ಪನ ಮಾತೆಗೆ ಧೂಪ ದೀಪ ಕರ್ಪೂರದಾರತಿಯೆತ್ತಿದರು 7 ಬೇಗಾದಿಲಕ್ಷಿಗೆ ಆಭರಣ ಸಡುಲಿಸಿ ಆಗ ಮುಡಿಯ ಬಿಚ್ಚಿ ದೇವೀಗೆ ಆಗ ಮುಡಿಯ ಬಿಚ್ಚೀ ಬೇಗಾದಿಂ ಕಂಮೆಣ್ಣೆ ಕಸ್ತೂರಿತೈಲ ಮೈಗೆ ತಾಳಮೇಳದ ಗತಿಯಿಂದಲೊತ್ತಿದ್ದರೂ 8 ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದ ಖ್ಯಾತಿ ಪಡೆದಿರುವಾ ಕ್ರಮುಕಾ ಬೇಗ ಖ್ಯಾತಿ ಪಡೆದಿರುವಕ್ರಮುಕಾ ನೂತನವಾದ ಕರ್ಪೂರವರ್ಣಗಳಿಂದ ಜಗ ನ್ಮಾತೆಗೆ ತಾಂಬೂಲವ ನೀಡಿದರೂ 9 ಸಣ್ಣವಾದ್ಯದೊಳಗೆ ನುಡಿಸೇ ಬೇಗ ವಾದ್ಯದೊಳಗೆ ನುಡಿಸÉೀ ಹಣೆಯೊಳಗೆ ಬಾಚಿ ಮಣಿಗಂಟನಿಕ್ಕಿ ಉಳಿದ ಎಣ್ಣೆ ಭಕ್ತರಿಗೆಲ್ಲ ಯಿತ್ತಾರು 10 ಮಿಂದು ಮಡಿಯನುಟ್ಟು ಚಂದದಿಂದಲೆ ದೇವಿ ತಂದ ನೈವೇದ್ಯವುಂಡೂ ಬೇಗ ನೈವೇದ್ಯವುಂಡು ಬಂದ ಭಕ್ತರಿಗೆಲ್ಲ ತೀರ್ಥಪ್ರಸಾದವಿತ್ತು ಮಂದಗಮನೆ ತನ್ನ ಮಂದಿರಕೆ ನಡೆದಾಳು 11 ಬೈತಲೆಗೆ ರಾಗಟೆ ಹೆರಳಿಗೆ ಭಂಗಾರಗೊಂಡೆಯವ ನಿತ್ತು ಪಾನುಪಟ್ಟಿಯು ಮುತ್ತಿನಬಟ್ಟೆ ಕಟ್ಟಿ ಬೇಗ ಮುತ್ತಿನಬಟ್ಟೆ ಕಟ್ಟಿ ಕತ್ತುರಿ ಬಾವುಲಿ ಕಮಲಸರಗಳೂ ಮುತ್ತಿನ ಮೂಗುತಿ ಮುಕುರಾವನಿಟ್ಟಳೂ 12 ಹಾರಪದಕ ಹಸ್ತಕಡಗ ಹರಡಿ ವಂಕಿ ಶೀರೆಕುಪ್ಪಸ ತೊಟ್ಟೂ ಬೇಗ ಶೀರೆಕುಪ್ಪಸ ತೊಟ್ಟು ಅಂದುಗೆ ಇಂದೀರಾದೇವಿ ತಾನಿಟ್ಟು ಬಂದಳು ಆಗಾ 13 ಭಾಷ್ಯಕಾರರು ಮೊದಲಾದ ಭಕ್ತರುಯೆಲ್ಲ ಲಕ್ಷ್ಮಿದೇವಿಗೆ ಆಗ ಭಾಗ್ಯಲಕ್ಷ್ಮಿಗೆ ಆಗಾ ಭಾರಿ ಯಾ ಶೀರೆ ಕುಪ್ಪುಸವನಿತ್ತು ಪುಷ್ಪ ಮರ್ಯಾದೆಗಳ ಮಾಡೀ ಕರೆತಂದರು ಬೇಗಾ 14 ಮಂದಗಮನೆ ಅಂದು ಗೋವಿಂದನ ಎದುರಲ್ಲಿ ಆ ನಂದದಿಂದಲೆ ಕುಳಿತೂ ಬೇಗ ಆನಂದದಿಂದಲೆ ಕುಳಿತು ಚಂದದಿಂ ಮಲ್ಲಿಗೆಮಾಲೆಯ ಕಳುಹಲು ಮಂದರೋದ್ದರ ತನ್ನಾ ಮಡಿದೀಗೆ ಕಳುಹಿದ 15 ಕೂಡಾರವಲ್ಲಿಯೆಂತೆಂಬೊ ದಿವಸದಲ್ಲಿ ಕೂಡಿ ಮನ್ನಾರುರಂಗನಾ ಬೇಗ ಮನ್ನಾರುರಂಗನಾ ಕ್ಷೀರಾನ್ನ ಭೋಜನಂಗಳ ಮಾಡಿದರು ಭೋಗಿಯ ದಿನದಿ ಕಲ್ಯಾಣವ 16 ಮಕರ ಸಂಕ್ರಾಂತೀಲಿ ಮಂದರೋದ್ದಾರ ಸಹಿತ ಚೊಕ್ಕ ಪಲ್ಲಕ್ಕಿಯೇರಿ ಬೇಗ ಚೊಕ್ಕ ಪಲ್ಲಕ್ಕಿಯೇರಿ ಪಕ್ಕ ಮೆರವಣಿಗೆಯಲಿ ಬಂದು ಹರುಷದಿಂದ ವೆಂಕಟಕೃಷ್ಣನ ಎಡದಲ್ಲಿ ಕುಳಿತಾಳು 17
--------------
ಯದುಗಿರಿಯಮ್ಮ
ಇವನೆ ಪ್ರಹ್ಲಾದನಿಂದಲಿ ಉಪಾಸ್ಯ ಪವಮಾನ ಪಿತ ಭಕ್ತವರದ ಲಕ್ಷ್ಮೀಶ ಪ. ವಲಯಕಾರದಿ ಶೇಷ ಛತ್ತರಿಯಾಗಿ ಹಲ ಮುಸಲ ಧರಿಸಿ ಎಡದಲಿ ವಾರುಣೀ ಬಲದಲ್ಲಿ ಶಂಬುಕ ವರ್ಣನೆಂಬ ಪುತ್ರನ ಸಹಿತ ನಲಿದು ಸೇರಿಸೆ ಇಂಥ ಆಸನದಿ ಕುಳಿತಾ 1 ಯೋಗಾಸನವನ್ಹಾಕಿ ಎಡತೊಡೆಯ ಮೇಲ್ ಸಿರಿಯು ಆಗಮನುತ ಬಲದ ತೊಡೆಯಲ್ಲಿ ವಾಯು ಭೋಗ ರೂಪನು ಸರ್ವ ಆಭರಣ ಶೃಂಗಾರ ಸಾಗರಾತ್ಮಜೆ ಪತಿಯು ಧರಿಸಿ ಮೆರೆವಂಥಾ2 ಶಿರದಿ ನವರತ್ನ ಮಕುಟವು ಫಣೆಯು ತಿಲಕವೂ ಕರ್ಣ ಕುಂಡಲವೂ ನಾಸಿಕ ಗಲ್ಲ ತೆರದ ಬಾಯ್‍ದಾಡೆಗಳು ದುರುಳರಿಗೆ ಘೋರ ವರಭಕ್ತರಿಗೆ ಅಭಯ 3 ಕಂಠ ಕೌಸ್ತುಭಮಣಿಯು ಶ್ರೀವತ್ಸ ತುಳಸಿ ಸರ ವೈಜಯಂತಿ ಹಾರಾ ಕರ ಶಂಖ ಚಕ್ರವು ಪದ್ಮ ಗದೆ ಅಭಯ ವಂಟಿ ಕರಶಿರಿ ಭುಜದಿ ದ್ವಯ ಯೋಗ ಚಿಹ್ನೆ 4 ಉರ ಉದರ ಶೃಂಗಾರ ಅರವಿಂದ ಪೊಕ್ಕಳಲಿ ಬ್ರಹ್ಮ ಮೆರೆಯೇ ಮಿರುಗುವೋ ಮಕುಟ ಉಟ್ಟಿರುವ ನಡು ಕಿರುಗೆಜ್ಜೆ ಕರಿಸೊಂಡಲಿನ ತೊಡೆಯು ಸುರವರದ ಚರಣಾ5 ಚರಣದಾಭರಣ ಸಾಲ್ಯೆರಳನಖ ಕಾಂತಿಗಳು ಪಾದ ಪದುಮಾ ಮೃಗ ಮುಖವು ನರಮೃಗಾಕೃತಿರೂಪ ತರಳ ಪ್ರಹ್ಲಾದನಲಿ ಕರುಣಾರ್ದ ದೃಷ್ಟಿ 6 ಎಡತೊಡೆಯಲಿ ಸಿರಿಯು ಬಲಕರದಿ ಪದುಮವ ಪಿಡಿದು ಎಡತೊಡೆಯ ಮೇಲೆ ಮದನನ ಕುಳ್ಳಿರಿಸುತಾ ಮದನ ಇರಿಸಿ ಹೂ ಬಾಣವನು ಪಿಡಿದು ರತಿ ಪದುಮ ಕರದಿಂದ ಶೋಭಿಸಲೂ 7 ಹರಿಗೆ ಬಲತೊಡೆಯಲಿದ್ದಂಥ ವಾಯುವು ತನ್ನ ಅರಸಿ ಭಾರತಿಯ ಎಡತೊಡೆಯಲಿಟ್ಟೂ ತರಳ ವಿಷ್ವಕ್ಸೇನನನು ಬಲದ ತೊಡೆಯಲ್ಲಿ ಇರಿಸಿಕೊಂಡತುಲ ಸಂತಸದಿಂದ ಮೆರೆಯೇ 8 ಚತುರ ಹಸ್ತನು ವಾಯು ಎಡಗೈಲಿ ಪಿಡಿದು ಗದೆ ಹಿತದಿ ಬಲಗೈಯ್ಯ ಭಕ್ತರಿಗಭಯ ತೋರ್ವ ಅತಿಭಕ್ತಿಯಿಂದುಭಯಕರ ಅಂಜಲಿಯ ಮಾಡಿ ಪತಿ ಭಿಕ್ಷೆ ಬೇಡುವಾ9 ನಾಭಿಯಲಿ ಬ್ರಹ್ಮ ಉದ್ಭವಿಸಿ ಹಸ್ತದಿ ವೇದ ಶೋಭಿಸಲು ಎಡತೊಡೆಯ ಮೇಲೆ ವಾಣೀ ಆಭರಣ ಶೃಂಗರದಿ ವೀಣೆ ಪುಸ್ತಕ ಧರಿಸಿ ವೈಭವದಿ ದೇವ ಮುನಿ ಎಡೆ ತೊಡೆಯೊಳಿರಲೂ10 ಬ್ರಹ್ಮ ಬಲತೊಡೆಯಲ್ಲಿ ಪಂಚಮುಖ ರುದ್ರನ್ನ ಸುಮ್ಮಾನದಿಂದ ಕುಳ್ಳಿರಿಸಿಕೊಂಡಿರಲೂ ಬ್ರಹ್ಮಸುತ ಕರದಿ ಆಯುಧ ಗೌರಿ ಎಡದಲ್ಲಿ ಷಣ್ಮುಖನ ಬಲ ತೊಡೆಯಲ್ಲಿಟ್ಟು ಮೆರೆಯೇ 11 ಗೌರಿಗಣಪನ ತನ್ನ ತೊಡೆಯೊಳಿಟ್ಟಿರಲು ಈ ರೀತಿಯಿಂದ ಪರಿವಾರ ಸಹಿತಾ ಶೌರಿ ಮೆರೆಯುವ ದಿವ್ಯ ಅದ್ಭುತಾಕೃತಿ ನೃಹರಿ ಪತಿ ಮನದಿ ತೊರೆ ಭಕ್ತರಿಗೆ 12 ಕಾಲನಾಮಕ ಗರುಡ ಬಾಲೆ ಸೌಪರ್ಣಿ ಲೀಲೆಯಿಂದಲಿ ಕೂಡಿ ಸಮ್ಮುಖದಿ ನಿಂದೂ ಓಲಗವ ಕೊಡುತ ಹರಿಗನುಕೂಲನಾಗಿರುವ ಲೀಲ ಮಾನುಷ ಇಂಥ ವೈಭವದಿ ಮೆರೆವಾ13 ಇಂತೆಸೆವ ಹರಿ ಎದುರು ನಿಂತು ಪ್ರಹ್ಲಾದ ಗುಣ ವಂತೆ ಸಾಧ್ವೀ ಸಾಧುಮತಿ ಸತಿಯ ಸಹಿತಾ ಅಂತರಂಗದಿ ಚಿಂತಿಸುತ ಅಂಜಲಿಯ ಕರದಿ ಶಾಂತಮನದಲಿ ಸುಖಿಸಿ ಆನಂದಿಸುವನೂ14 ವರಭಕ್ತ ಪ್ರಹ್ಲಾದ ವರದನ್ನ ಈ ರೂಪ ನರರು ಚಿಂತಿಸಲಳವೆ ಚರಿಪ ಭಕ್ತಿಯಲೀ ಪರಮ ಉತ್ಸಾರಕರನೊಂದೊಂದು ಅಂಶದಲಿ ವರ ಭಕ್ತರಲಿ ನೆಲಸೆ ಚಿಂತನೆಗೆ ನಿಲುವಾ 15 ಪರಿವಾರ ಆಭರಣ ಆಯುಧಗಳಿಂ ಮೆರೆವ ನರಹರಿಯ ಈ ರೂಪ ನಿರುತ ಸ್ಮರಿಸೇ ಗುರುವರದ ಕರಿಗಿರೀ ಯೋಗ ಭೋಗಾ ನೃಹರಿ ಕರುಣಿಸುವ ಮುಕ್ತಿ ಗೋಪಾಲಕೃಷ್ಣವಿಠಲಾ16
--------------
ಅಂಬಾಬಾಯಿ
ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ. ಕರದ್ವಯದಲಿ ಶಂಖ ಚಕ್ರಪಿಡಿದಿಹ ಕಿರುನಗೆ ನಗುತ ಸುಲಿಪಲ್ಲಿನ ಚಲುವ ಸ್ವರಗಳ ಪಿಡಿಯುತ ವೇಣು ನುಡಿಸುವ ಸರಸಿಜನಾಭ ಹೃನ್ಮಂದಿರದಿ ಮೆರೆವ 1 ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ ಸತಿ ಹೆಗಲಲಿ ಇಡುವ ನಗಧರ ನರ್ತನವಾಡಿ ಮುದವೀವ 2 ಕಾಲಕಡಗ ಗೆಜ್ಜೆ ಪಾಡಗರುಳಿಯು ಮೇಲೆ ಪೀತಾಂಬರ ಜರಿಯ ವೈಭವವು ಸಾಲ ಮುತ್ತಿನಹಾರ ಪದಕದ್ವಜ್ರಗಳು ಓಲಾಡುವ ನೀಲಾಂಬರ ಹೊದ್ದಿಹ ಒಲಪು 3 ಕಂಠ ಕೌಸ್ತುಭಮಣಿ ಅಧರದ ಕೆಂಪು ಕರ್ಣ ಕದಪು ಕನ್ನಡಿಯು ಬಂಟರಾದವರನ್ನು ಪೊರೆಯುವ ದೃಷ್ಟಿ ವೈ - ನಾಸಿಕ ಫಣೆಯ ತಿಲುಕವು 4 ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ ಪಾಪವ ದಹಿಸುವ ಪಾವನ ವೇಣು ಆಪಾದ ಮೌಳಿಯ ರೂಪದ ಚಲುವ ಗೋಪಾಲಕೃಷ್ಣವಿಠ್ಠಲ ಎನ್ನ ಕಾವ 5
--------------
ಅಂಬಾಬಾಯಿ
ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. 1 ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ 2 ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಹೆಣ್ಣುಗಳ ಮಧ್ಯೆ ಇಳಿಸಿದರು3 ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ- ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ ತಂದು ಅರಿಶಿಣ ಎಣ್ಣೆ ಗಂಧವಿತ್ತು4 ತಡಮಾಡಲಾಗದು ಕಡಲಶಯನ ನಿಮ್ಮ ಮಡದಿಯಂಗಕ್ಕೆ ತೊಡೆವುದೆನಲು ಮಡದಿಯಂಗಕ್ಕೆ ತೊಡೆವುದು ಎನಲಾಗಿ ಕಡು ಹರುಷದಿ ಸತಿಯಳ ನೋಡಿದನು 5 ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ | ಕನ್ಯೆ ಶಿರೋಮಣಿ ಪಾವನ ದೇಹಿ || ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ | ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ 6 ತಂದೆ ನಂದನರಿಗೆ ಬಂಧು ಬಳಗ ಸುತ್ತ | ಹೊಂದಿದ ಜನರಿಗೆ ಹಲವರಿಗೆ || ಹೊಂದಿದ ಜನರಿಗೆ ಹಲವರಿಗೆ ಕದನ | ತಂದು ಹಾಕುವಳೆಂದು ಹಚ್ಚಿದನು 7 ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ | ಬಾಗಿಲ ಕಾಯಿಸುವಳೆ ಬಲ್ಲಿದರ || ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ | ಸಾಗರನ ಮಗಳು ಎಂದು ತೊಡೆದನು 8 ಇಂದಿರಾದೇವಿ ಬಾ ಮಂದಿರಾಂಬುಜ ರಾಮ | ಸುಂದರ ಶ್ರೀವಾರಿ ಮಂಗಳಗಾತ್ರೆ || ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು | ಅಂಗಜ ಜನಕನು ನಗುತಲಿದ್ದ 9 ರಮಣಿಯ ದೇಹಕ್ಕೆ ಕಮಲನಾಭನು ಎದ್ದು | ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ || ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ | ಕ್ರಮದಿಂದ ಲೇಪಿಸಿ ಊಟಣಿಸಾರಿ 10 ಸಾಕಾರಗುಣವಂತಿ ತ್ರಿಲೋಕದ ಜನನಿ | ನಾಕಜವಂದಿತಳೆ ನಾಗಗಮನೆ || ನಾಕಜವಂದಿತಳೆ ನಾಗಗಮನೆ ಏಳೂ | ಶ್ರೀಕಾಂತನ ಸೇವೆಯ ಮಾಡೆಂದರು 11 ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು | ನಿಂದು ಸಮ್ಮುಖದಲ್ಲಿ ರಂಗನ ನೋಡಿ | ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ | ಚಂದ್ರವದನೆ ಪತಿಗೆ ಹಚ್ಚಿದಳು 12 ಗೋವಳರ ಎಂಜಲು ಆವಾಗ ತಿಂದವನೆ | ಮಾವನ್ನ ಕೊಂದವನೆ ಮಾಯಾಕಾರ || ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ | ಸೇವೆಗೆ ಶಕ್ತಳೆನುತ ಹಚ್ಚಿದಳು 13 ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ | ಮುನ್ನೆ ತೊತ್ತಿನ ಮಗನ ಮನಿಯ ಉಂಡ || ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ | ಹೆಣ್ಣಾಗಿ ಇದ್ದವನೆಂದು ಹಚ್ಚಿದಳು 14 ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ | ಭಿನ್ನವಖಿಳ ಜೀವಕ್ಕೆನ್ನ ಒಡೆಯ || ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು | ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು 15 ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ | ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ || ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು | ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು 16 ದೇವಿ ದೇವೇಶಗೆ ಈ ಉರುಟಣೆಯಿಲ್ಲ | ಆವಾವ ಬಗೆ ಎಲ್ಲ ತೋರಿಸುತ್ತ || ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ | ಹೂವು ಬಾಸಿಂಗವ ರಚಿಸಿದರು17 ಅಸುರ ವಿರೋಧಿ ವಸುದೇವನಂದನ | ಪಶುಪತಿ ರಕ್ಷಕ ಪರಮ ಪುರುಷ || ಪಶುಪತಿ ರಕ್ಷಕ ಪರಮ ಪುರುಷ ಎಂದು | ಹಸನಾಗಿ ಲೇಪಿಸಿ ಇತ್ತ ಜನರ 18 ಶೃಂಗಾರವಂತೇರು ರಂಗ ಶ್ರೀಲಕುಮಿಗೆ | ಮಂಗಳಾರತಿ ಎತ್ತಿ ಹರಸಿದರು || ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ | ಅಂಗನೆಯಳ ಸಹಿತ ನಡೆಯೆಂದರಾಗ 17 ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ | ಮತ್ತೆ ಸುಗಂಧಿಯರು ಹೊಸ್ತಿಲೊಳಗೆ || ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು | ಪತ್ನಿಯ ಹೆಸರು ಪೇಳೆಂದರು ಆಗ 20 ಬೇಗ ಮಾರ್ಗವ ಸಾರಿ ತೂಗಲಾರನು ಇವಳ | ಸಾಗಿ ಪೋಗುವನೆಂದು ಪೇಳುತಿರಲು || ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ | ತೂಗವದೆಂತು ನಾಳೆ ನುಡಿಯೆಂದರು 21 ನಕ್ಕು ಸಂತೋಷದಲಿ ರುಕ್ಮಿಣಿ ಎಂದನು | ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ || ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು | ಚಕ್ರಪಾಣಿ ಎಂದು ಪೇಳಿದಳು ಲಕುಮಿ 22 ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ | ಮಂಡಲದ ಚರಿತೆ ತೋರಿದರು ಆಗ || ಮಂಡಲದ ಚರಿತೆ ತೋರಿ ವಧು-ವರಗಳಿಗೆ | ಕಂಡವರಿಗೆ ಮದುವೆಯೆನಿಸಿದರು 23 ದಂಪತಿಗಳು ಒಲಿದು ಇಂಪಾಗಿ ಉರುಟಣಿ | ಸೊಂಪಾಗಿ ಮಾಡಿದರು ಅನೇಕವಾಗಿ || ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ 24
--------------
ವಿಜಯದಾಸ