ಮುಖ್ಯಪ್ರಾಣ ಕರವೆತ್ತಿ ನಿಂದ ಪ
ಹರಿಯೆ ಪರನೆನ್ನದವನ ಹಲ್ಮುರಿವೆನೆಂದು ಅ.ಪ.
ಸಿರಿ ರಾಮನಾಜ್ಞೆಯನು ಸಿರದೊಳಾನುತ ಬಂದು
ವರಕಪಿಗಳೊಡಗೂಡಿ ಸಿರಿದೇವಿಯನರಸುತ
ಶರಧಿತಟಕೆ ಬಂದು ಸಿರಿಪೋದ ಪಥವರಿಯದೆ
ಪರಿತೋರದಿರ್ದ ಹರಿವರರಿಗಭಯವಿತ್ತು 1
ಇರುಳು ಇಂದ್ರಜಿತುವಿನ ಶರಹತಿಯಲಳಿದಂಥ
ಸಿರಿ ರಾಮ ನೋಡುತ
ಮರುಗುತಿರಲಂದು ವರ ಜಾಂಬವನ ಸುಮತಿಯಲಿ
ತ್ವರಿತದಿ ಸಂಜೀವನ ಗಿರಿಯ ತಹೆನೆನ್ನುತ 2
ಭರದಿ ದಶಶಿರನು ತಾನರಿಯದೆ ಹನುಮನ ಬಲ
ಭರವಸದಲಿ ಮಾಡಿ ಮೂರು ಗುದ್ದಿನ ಪಂಥ
ಕರಹತಿಗೆ ಕಂಗೆಟ್ಟು ಧುರವ ಬಿಟ್ಟೋಡುತಿರೆ
ಅರಸಿ ಅಸುರನ ಪಿಡಿದ ಹರಿಸು ಋಣವನೆಂದು 3
ದುರುಳ ಕೀಚಕನಂದು ಕರಿಗಮನೆಯನು ಕಂಡು
ಸ್ಮರಶರಹತಿಯಿಂದ ಉರುತರದಲಿ ನೊಂದು
ಹರಿಣಾಕ್ಷಿಯನು ಬರಿಸಿ ಸೆರಗ್ಹಿಡಿದೆಳೆದುದನು
ತರಳೆ ಮುಖದಿ ಕೇಳವನ ಸಿರ ಮುರಿವೆನೆಂದು 4
ಕುರುಪತಿಯ ಸಭೆಯಲಿ ದುರುಪದಿ ಗೈದ ಶಪಥ
ಮರೆಯದೆ ದುಶ್ಶಾಸನನ ಧುರದಿ ಕೆಡಹಿ ಕೊಂದು
ಉರ ಬಗೆದು ಕರುಳ ನಿಜತರುಣಿಗೆ ಮುಡಿಸುವಾಗ
ಬರಲಿ ಬಿಡಿಸುವರೆಂದು ಉರು ಗದೆಯನು ಪಿಡಿದು 5
ಹರಿಹರರು ಸರಿಯೆಂದು ಹರಟುತಿರ್ದವರನು
ಗುರುತರ ವಾಕುಗಳೆಂಬ ಬಿರುಬಾಣದಿಂದ
ಗರ ಹೊಡೆದವರ ಮಾಡಿ ಪರತತ್ವವನು ಪೇಳಿ
ಭರದಿ ನಡೆದೆ 'ಪರಮೋನಹತಿ ಸದೃಶ' ವೆಂದು 6
ಸರುವರಂತರ್ಯಾಖ್ಯ ಹರಿಯಾಜ್ಞಾನುಸಾರ
ಸರುವ ಜೀವರಿಗೆ ತಾನು ಗುರುವೆನಿಸಿಕೊಂಡು
ಸಿರಿ ರಂಗೇಶವಿಠಲನ
ದುರಿತ ಭಯವಿಲ್ಲೆಂದು 7