ಕೃಪೆಯಿರಲಿ ಸ್ವಾಮಿ ಕೃಪೆಯಿರಲಿ
ಅಪರಿಗಣ್ಯ ಸುಗುಣಾಂಬುಧಿ ಹರಿ ನಿನ್ನ ಪ.
ಬೇರಿಗೆ ದಿವ್ಯ ಕಾವೇರಿ ನದಿಯ ಜಲ
ಧಾರೆಯಿರಲು ಕೊಂಬೆಗಳುಬ್ಬಿ
ಸಾರಭರಿತ ಫಲದೋರುವ ತರುವಂತೆ
ಧಾರುಣಿಪರು ಕೈ ಸೇರುವರು 1
ಶತ್ರುಗಳಂಜಿ ಬಗ್ಗುವರು ಕಾಳ ಕೂಟ
ಪಥ್ಯವಾಗುವುದು ನಿನ್ನಣುಗರಿಗೆ
ನಿತ್ಯ ಮಾಡುವಾ ದುಷ್ಕøತವೆಲ್ಲವು ಪರ-
ಮೋತ್ತಮ ಧರ್ಮಕರ್ಮಗಳಾಹಲೂ 2
ಕನಸು ಮನಸಿನಲ್ಲಿ ನೆನೆಸುವ ಕಾರ್ಯಗ-
ಳನುಕೂಲವಾಗುವದನುದಿನವು
ಮನಸಿಜನಯ್ಯ ನೀನನುವಾಗಿರೆ ಸರ್ವ
ಜನರೆಲ್ಲರು ಬಹು ಮನ್ನಿಸುವರು 3
ಋಗ್ಯಜುಸ್ಸಾಮಾಥರ್ವಣಗಳೆಂಬ ವೇದ ಸ-
ಮಗ್ರ ನೀ ಕರುಣಿಸಿ ಒಲಿದಿರಲು
ಸುಜ್ಞಾನ ಭಕ್ತಿ ವೈರಾಗ್ಯ ಸಹಿತವಾಗಿ
ಭಾಗ್ಯದೇವತೆ ಕೈ ಸೇರುವಳು 4
ಈ ಕಾರಣದಿಂದನೇಕರ ಬಯಸದೆ
ಶ್ರೀಕರ ನೀ ಕರುಣಿಸಿದರಿಂದು
ಸಾಕೆಂದೊದರುವೆನೇಕಮನದಲಿ ದ-
ಯಾಕರ ವೆಂಕಟರಮಣನಿಂದು 5