ಪಾಹಿ ಮೋಹನ ವಿಠಲ ಪರಮಕರುಣಾಜಲಧಿ
ಮಹದಾದಿ ದೇವ ವಂದ್ಯ |
ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು
ರಹಸ್ಯಮತಿ ಕೊಡುವುದು ಸ್ವಾಮಿ ಪ
ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ
ಅನಂತ ಜನುಮವಾಗೆ
ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು
ಜ್ಞಾನಿಗಳಿಗರಿವಾಗಿದೆ
ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ
ಮಾನವನ ಕ್ಲೇಶಕೆಣಿಯೆ
ಆನಂದ ನಂದನನೆ ತೃಣವ ಪಿಡಿದು ರುತುನ
ವನು ಮಾಡಿ ತೋರುವ ಸ್ವಾಮಿ 1
ನಿನ್ನಧೀನ ಕರ್ಮಸ್ವಭಾವ ಮೊದಲಾಗಿ
ಅನ್ಯಥಾ ಯಲ್ಲಿ ಕಾಣೆ
ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ
ಬಿನ್ನಪವ ಬರಿದೆನಿಸದೆ
ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ
ನಿನ್ನ ದಾಸನ ದಾಸನು
ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ
ಸನ್ನನಾಗೋ ಪಾವನ್ನರನ್ನ 2
ನರರಿಗೆ ಸಾಧನ ಸತ್ಕೀರ್ತನೆ ಎಂದು
ಪರಮೇಷ್ಠಿ ಒರೆದನಿದಕೊ
ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ
ದುರಿತ ಬೆಮ್ಮೊಗವಾಗವು
ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ
ಶರಣರೊಳಗಿಟ್ಟು ಕಾಪಾಡು
ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ
ಪರಿಪೂರ್ಣವಾಗಿ ಇರಲಿ ಸ್ವಾಮಿ3