ಯಾತ್ರಕ್ಕೆ ಬಂದಿರ್ದೆನೋ ಭುವನ
ಯಾತ್ರ ಮಾಡುವೆನು ಪ
ಧಾತ್ರಿ ಈರೇಳಕ್ಕೆ ಸೂತ್ರಧಾರನ ಕೃಪಾ
ಪಾತ್ರನಾಗಿ ಪವಿತ್ರನಾಗುವೆನು ಅ.ಪ
ದೇಶ ತಿರುಗುವೆನು ದೇಹ್ಯದ
ವಾಸನೆ ತೊಡೆಯುವೆನು
ಆಶಾಪಾಶ ನೀಗಿ ದೋಷರಹಿತನಾಗಿ
ದಾಸಜನಕೆ ಬಾಗಿ ಸಂತೋಷ ಪಡೆಯುವೆನು 1
ಪೃಥ್ವಿ ತಿರುಗುವೆನು ಹುಡುಕಿ
ಸತ್ಯರ ಕಾಂಬುವೆನು
ನಿತ್ಯನಿರ್ಮಲ ಹರಿಭಕ್ತಿ ಕವಚ ತೊಟ್ಟು
ಮತ್ತೆ ಸಾವ್ಹುಟ್ಟುವ ಕುತ್ತ ಗೆಲಿಯುವೆನು 2
ಕ್ಲೇಶವ ತರಿಯುವೆನು ಮಾಯ
ಮೋಸವ ಗೆಲಿಯುವೆನು
ದಾಸಜನರ ಪ್ರಾಣೇಶ ಶ್ರೀರಾಮನ
ದಾಸನಾಗಿ ಮುಕ್ತಿ ಆಸನೇರುವೆನು 3