ದೇವಗಂಗೆಯು ಹರಿಯುತಿರಲು ತೀರದಲ್ಲಿ ನಾ
ಬಾವಿಯನು ತೋಡುತಲಿ ಬಲು ಬಳಲಿದೆ ಪ
ಗೋವು ಕರೆಯುವ ಕ್ಷೀರ ಕೊಡಕೊಡದಿ ತುಂಬಿರಲು
ಬೇವಿನೆಣ್ಣೆಯ ಬಯಸಿ ಬಳಲಿ ಬೆಂದೆ ಅ.ಪ
ಅರಸುತನದಲಿ ಆಳುತಿರುವ ಸ್ಥಾನವನು ನಾ
ಮರೆತು ಕಡು ಹೇಡಿಯಂದದಿ ನಡೆದೆನೊ
ದುರಿತರಾಶಿಗಳನ್ನು ತರಿವ ಮಂತ್ರಗಳರಿತು
ಕುರುಬ ಹೊದ್ದಿರುವ ಕಂಬಳಿ ಬಯಸಿದೆ 1
ವೇದಾಂತ ಸಾಮ್ರಾಜ್ಯದಧಿಕಾರದಲಿ ಕುಳಿತು
ಕಾದ ಮರುಭೂಮಿ ರಾಜ್ಯವ ಬಯಸಿದೆ
ಆದರದಿ ಕರೆದು ಬಡಿಸುವರ ಭೋಜನ ತೊರೆದು
ಮೂದಲಿಸುವರನು ಬೇಡಿದೆನನ್ನವ 2
ನೀಗಿ ಪುಣ್ಯವು ನಿನ್ನ ದಯವು ತಪ್ಪಿದ ಮೇಲೆ
ಕೈಗೊಂಬೆ ಕರಡಿಯಾಗುವುದು ಕ್ಷಣದಿ
ರಾಗಗಳ ಕಳೆದು ಮನವಚನ ಕಾಯಗಳನ್ನು
ಬೇಗ ನಿನ್ನಡಿಗಳಿಗೆ ಸೆಳೆಯಲೋ ಪ್ರಸನ್ನ 3