ರಾಮನ ನೋಡಿದೆ ರಘುಕುಲ ತಿಲಕನ
ಕಾಯ ಕೌಸಲ್ಯ ತನಯನ ಪ
ತಾಮಸ ದೈತ್ಯರ ಲೀಲೆಯಲಿ ಕೊಂದು
ಭೂಮಿ ಭಾರವನಿಳುಹಿದ ನಿಸ್ಸೀಮನಅ.ಪ.
ತಾಟಕಾದಿಗಳ ಘೋರಾಟವಿಯಲಿ
ಪಾಟುಪಡಿಸಿದ ಹಾಟಕಾಂಬರನ
ತೋಟಿಗೊದಗಿದ ಮಾರೀಚಾದಿಗಳ
ಆಟನಾಡಿಸಿದ ನೀಟುಗಾರ 1
ಹಲವು ಕಾಲದಿ ಶಿಲೆಯಾಗಿರ್ದ
ಲಲನೆ ಅಹಲ್ಯೆಯ ಶಾಪವ ಹರಿಸಿ
ಕಲುಷವ ಕಳೆಯುತ ಕುಲಸತಿ ಮಾಡಿದ
ನಳಿನ ನಯನನ 2
ಹರನ ಧನುವನು ಸ್ಮರನ ಧನುವಿನಂತೆ
ತ್ವರದಿ ಮುರಿದು ನಿಂದ ಸುಕುಮಾರನ
ಧರಣಿಪ ಜನಕನ ಭಕ್ತಿಗೆ ಒಲಿದು
ಧರಣಿಜೆಯ ವರಿಸಿ ಹರುಷವಿತ್ತನ 3
ತಾತನ ಭಾಷೆಯ ಪ್ರೀತಿಯಿಂ ಸಲಿಸೆ
ಸೀತೆ ಸಹಿತ ಭ್ರಾತ ಲಕ್ಷ್ಮಣವೆರಸಿ
ಆತುರದಿಂದಲಿ ಅರಣ್ಯವನೈದಿ
ಕೌತುಕ ತೋರುತ ಚರಿಸಿದವನ4
ಖರದೂಷಣ ತ್ರಿಶಿರಾದಿ ರಕ್ಕಸರ
ಅರೆಕ್ಷಣದಲಿ ತರಿದು ಬಿಸುಟವನ
ಹಿರಣ್ಯಮೃಗವ ಬೆನ್ನಟ್ಟಿ ಕೆಡಹುತ
ವರ ಜಟಾಯು ಶಬರಿಗೆ ಒಲಿದವನ 5
ವಾತಸುತನ ಕಂಡಾತನ ಪದುಳಿಸಿ
ತರಣಿ ಸುತಗೆ ಅಭಯವನಿತ್ತ
ಜಾತವೇದನೆದುರಲಿ ಸಖ್ಯವ ಮಾಡಿ
ಘಾತಕ ವಾಲಿಯ ನಿಗ್ರಹಿಸಿದನ 6
ಕೋತಿ ಕರಡಿಗಳ ಹಿಂಡನು ಕೂಡಿಸಿ
ಸೇತುವೆಗಟ್ಟಿಸಿ ಜಲಧಿಯ ದಾಟಿ
ಪಾತಕಿ ರಾವಣನÀ ಶಿರಗಳ ಕಡಿದು
ಸೀತೆಯ ಸೆರೆಯನು ಬಿಡಿಸಿದಾತನ 7
ಮೊರೆಯನು ಪೊಕ್ಕಾ ವರ ಭೀಷಣನ
ಕರುಣದಿ ಕರೆದು ಕರವನು ಪಿಡಿದು
ಧರೆಯಿದು ಸ್ಥಿರವಾಗಿರುವ ಪರಿಯಂತ
ದೊರೆತನ ಮಾಡೆಂದ್ಹರಸಿದಾತನ 8
ಅಕ್ಕರೆಯಿಂದಲಿ ಅರ್ಚಿಸುವರಿಗೆ
ತಕ್ಕಂತೆ ವರಂಗಳ ನೀಡುತಲಿ
ಮಿಕ್ಕು ರಾಜಿಸುತಿಹ ಪಂಪಾಪುರದ
ಚಕ್ರತೀರ್ಥದಿ ನೆಲೆಸಿಹನ 9
ಕಂತುವೈರಿ ವಿರುಪಾಕ್ಷಗೆ ತಾರಕ
ಮಂತ್ರ ನಾಮಕನಾಗಿರುತಿರ್ಪನ
ಯಂತ್ರೋದ್ಧಾರನಾಗಿರುವ ಹನುಮನ
ಮಂತ್ರಿಯ ಮಾಡಿಕೊಂಡು ರಾಜಿಪನ 10
ದುಷ್ಟ ರಕ್ಕಸ ದಮನವ ಮಾಡಿ
ಶಿಷ್ಟ ಜನರುಗಳಿಷ್ಟವ ಸಲಿಸುತ
ಶ್ರಿಷ್ಟಿಗೊಡೆಯನೆನಿಸಿ ಮೆರೆಯುತಲಿರುವ
ದಿಟ್ಟ ಶ್ರೀ ರಂಗೇಶವಿಠಲನ 11