ಮರೆವಿನೊಳಗೆ ಮನೆಮಾಡಿದ್ದಿ ಮನ
ಅರಿವಿನ ಆಲಯ ಬಿಟ್ಟಿದ್ದಿ ಪ
ಹರಿದುಹೋಗುವಂಥ ಸಿರಿಗೆ ಒಲಿದು ನೀ
ಪರಮ ಹರಿಯ ಪಾದಕ್ಹೊರತಿದ್ದಿ ಅ.ಪ
ಮಂದಿಮಕ್ಕಳೆಂದು ನೆಚ್ಚಿದ್ದಿ ನಿನ್ನ
ಹಿಂದೆ ಬರುವರೇನು ಅಂತಿದ್ದಿ
ಕುಂದುವ ಜಗ ಮಾಯದಂದಗೆಟ್ಟು ಒಬ್ಬ
ನೊಂದಿನ ಹೋಗ್ವುದು ಮರೆತಿದ್ದಿ 1
ಸಿರಿಸಂಪತ್ತಿಗೆ ಹಿಗ್ಗಿದಿ ಇದು
ಸ್ಥಿರವಲ್ಲೆಂಬುದು ಅರಿಯದ್ಹೋದಿ
ಎರೆದೆಣ್ಣಿರುವನಕುರಿವ ದೀವಿಗೆಯೋಲ್
ವರ ಪುಣ್ಯಿರುವನಕಿರುತದೆ ಸಿರಿಯದು 2
ಹೇಳಿದಮಾತನು ಕೇಳದ್ಹೋಗಿ ಮನ
ಮೂಳನಾಗಬೇಡೆಲೆ ಗೂಗಿ
ಹಾಳುಯೋಚನೆ ಬಿಟ್ಟು ಮೇಲುಪದವಿ ಪಡಿ
ಶೀಲ ಶ್ರೀರಾಮಗೆ ತಲೆಬಾಗಿ 3