ಇಂದು ನಮ್ಮ ಮನಿಲಿ ಬ್ರಹ್ಮಾನಂದ
ಬಂದು ಭಾವ ಪೂರಿಸಿದ ಮುಕುಂದ ಧ್ರುವ
ಎನ್ನಮನಕೆ ಮಾಡಿದ ಮನೋಹರ
ಚೆನ್ನಾಗೊಲಿದು ದೋರಿದ ಸಹಕಾರ
ಮನ್ನಿಸೆನಗೆ ಬೀರಿದ ನಿಜಸಾರ
ಇನ್ನೊಬ್ಬರಿಗ್ಹೇಳುದಲ್ಲೀ ವಿಚಾರ 1
ದಯದಿಂದ ಪಿಡಿದು ಎನ್ನ ಕೈಯ
ಶ್ರೇಯ ಸುಖ ನೀಡಿದ ಪ್ರಾಣಪ್ರಿಯ
ತ್ರಯ ಗುಣಾತೀತದ ಸುಖಾಶ್ರಯ
ತ್ರೈಲೋಕದೊಳೆನಗೆ ವಿಜಯ 2
ಕಣ್ಣು ಪಾರಣಗೈಸಿದೆನ್ನ ನೋಡಿ
ಎನ್ನೊಳನುಭವಾಮೃತಸಾರ ನೀಡಿ
ಚಿಣ್ಣಮಹಿಪತಿ ಕೈವಶಗೂಡಿ
ಧನ್ಯಧನ್ಯಗೈಸಿದ ದಯಮಾಡಿ 3