ಶ್ರೀನಿವಾಸ ಭಕ್ತಪೋಷಣಭೂಷ ಮನ್ಮಂದಿರವಾಸ
ಶ್ರೀನಿವಾಸ ಪಾದಾತನ ಜನರನು
ಸಾನುರಾಗದೊಳ್ಮಾನಿಸಿ ಸಲಹುವ ಪ.
ಬಾಲತ್ವದಿಂದ ಬಹುವಿಧವಾದ ಭಕ್ತಿಯನಿತ್ತು
ಲಾಲಿಸಿ ಪೊರೆದ ಪೂಜ್ಯಪಾದ ಈ ಮಧ್ಯದೊಳಾದ
ಧಾಳಿಗಳನು ನಿರ್ಮೂಲಗೈದ ಕರು-
ಣಾಳು ರಾಜ ನಿನ್ನಾಳಾಗಿಹೆನು 1
ಪಂಚಭೌತಿಕವಾದ ತನುವಿಂದ ಆಗುವ ತಪ್ಪ
ಕಿಂಚಿನ ವರದ ನೀ ದಯದಿಂದ ಕ್ಷಮಿಸೈ ಗೋವಿಂದ
ವಂಚಿಸಿ ದಾನವದಿತಿಜರ ಸುರರಿಗೆ
ಹಂಚಿದಿ ಸುಧೆಯನು ಶುಭಕರದಿಂದ 2
ಕಮಲಾಬ್ಜಭವರುದ್ರೇಂದ್ರಾದಿಗಳು ಪಾದಯುಗ ಕಲ್ಪ
ದ್ರುಮ ನಿನ್ನ ನೆಳಲನಾಶ್ರೈಸಿಹರು ಕರುಣಾರಸದೋರು
ನಮಿಸುವೆ ಎಂಬೀ ಮಮತೆಯಿಂದ ಎ-
ನ್ನಮಿತಪರಾಧವ ಕ್ಷಮಿಸುವ ಹರಿಯೆ 3
ಇಂದ್ರಿಯಂಗಳ ಭಾವನೆ ಬಹುಘೋರ ಅದರಲ್ಲಿ ಮುಳುಗಿದ-
ರಿಂದಿರಾಧವ ನೀನೆ ಬಹುದೂರ ಆ ರೀತಿಯ ಭಾರ
ಹೊಂದಿದ ದಾಸರಿಗೆಂದು ತಾರಾ-
ಮಂದರಾದ್ರಿಧರಾ ಮಾಧವಧೀರ 4
ಚರಣ ಸಂಸ್ಮರಣೆ ಮಾತ್ರ ಬೇಕು ಇದರಿಂದ ಸರ್ವ
ಪುರುಷಾರ್ಥ ಲಬ್ಧಿಗಿನ್ನು ಸಾಕು ಇರುವುದೆ ಈ ನಾಕು
ಉರಗ ಗಿರೀಂದ್ರನ ಶಿರದಲಿ ಮಂಡಿಸಿ
ಮೆರೆವ ಸುಖಾಂಬುಧಿ ಸುರವರ ನಾಥ5