ಕಾವೇರಿ ಕಲುಪಾಪಹಾರಿ ಪಾವನ
ಶರೀರೆ ಶುಭತೋಷಕಾರಿ ಪ
ವಾಸುದೇವ ರಂಗೇಶನಾಲಯಕೆ ನೀ
ನಾವರಣಳಾಗಿಪ್ಪೆ ವಿರಜೆಯಂತೇ
ದೇವ ಋಷಿ ಗಂಧರ್ವ ಪಿತೃಪ ನರವರರಿಂದ
ಸೇವನೀಯಳಾಗಿ ಸರ್ವಾರ್ಥ ಪೂರೈಪೆ 1
ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ
ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ
ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ
ಸಲಿಲಮಂದಿರೆ ನಿನ್ನ ಕರುಣಕೇನೆಂಬೆ 2
ರವಿ ತುಲಾರಾಶಿಗೈದಿದ ಸಮಯದೊಳಗೊಂದು
ಮಜ್ಜನ ಗೈವ ಮಾನವರಿಗೆ
ಪವನಾಂತರಾತ್ಮಕನ ಪಾದಕಮಲವ ತೋರಿ
ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ 3
ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ ಬಹು
ಪರ ಮನು
ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ
ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು 4
ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ
ಬೇಡಿಕೊಂಡೆನು ಹೃದಯ ನೀಡದೊಳಗೇ
ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ
ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ಬ 5