ಮಂಗಳ ಜಯ ಜಯ ಮಂಗಳ ತುಳಸಿಗೆ
ಮಂಗಳ ಜಯ ಜಯ ರಂಗನಾಯಕಗೆ ಪ
ವಾರಿಧಿ ಮಥÀನದಿ ವಾರಿಜನಾಭನ
ವಾರಿಜನೇತ್ರನ ವಾರಿಗಳಿಂದ
ತೋರಿದ ತುಳಸಿಯು ಸೇರಿದಳೆಲ್ಲ ಶ-
ರೀರವ ಪಾವನ ಮಾಡಬೇಕೆನುತ 1
ತುಳಸಿಯ ನಾಮವ ಬೆಳೆಸಿಯೆ ಲೋಕವ
ಬಳಸಿಕೊಂಡಿರುವೆನು ಎನುತಲೆ ಬಂದು
ಕಳಸಿದ ಮನುಜರ ಉಳಿಸಬೇಕೆನುತಲೆ
ಕಳಸದ ತೆರನಂತೆ ಉದಿಸಿದಳು ತುಳಸಿ 2
ಸಾಲಿಗ್ರಾಮವು ಇಲ್ಲದಾತನ ಮನೆಯೊಳು
ಕಾಲೂರಿ ನಿಲ್ಲಳು ಹರುಷದೊಳಿವಳು
ಪಾಲಿಪ ಹರಿಶಿಲೆಯಿರುವಂಥ ಸ್ಥಳದೊಳು
ಓಲಗವಾಗಿಯೆ ತೋರುತ್ತಲಿಹಳು3
ಎಲ್ಲಿಯು ತುಳಸಿಯು ಅಲ್ಲಿಯೆ ಶ್ರೀಹರಿ
ವಲ್ಲಭೆ ಸಹವಾಗಿ ಇರುತಿಪ್ಪ ಬಿಡದೆ
ಫುಲ್ಲನಾಭನು ಕೃಷ್ಣ ಆಡಿದ ಪರಿಯನು
ಗೊಲ್ಲತಿಯರು ಕಂಡು ನಾಚಿ ಹಿಗ್ಗಿದರು 4
ಬಂದಳು ಭಕ್ತರ ಮಂದಿರದೆಡಗೆ ಗೋ-
ವಿಂದನ ಕಂಡಿರೆ ಎಂದು ಕೇಳಿದಳು
ವೃಂದಾವನದೊಳು ನಿಂದಳು ತುಳಸಿಯು
ಚಂದವು ನಿಮ್ಮಯ ಭವನದೊಳೆನುತ 5
ಗೋವಿನ ತುಪ್ಪದಿ ದೀವಿಗೆಯಿರಿಸಿಯೆ
ಭಾವ ಶುದ್ಧತ್ವದಿ ಬಲವಂದರವಳು
ಕಾವಲು ಪೋಗಿಯೆ ಕರ್ಣದ ಒಳಗಿದ್ದು
ಜೀವಿತ ಮುಕ್ತಿಯ ತೋರುವೆನೆನುತ 6
ಸರ್ವತೀರ್ಥಗಳನ್ನು ಮೂಲದಿ ಧರಿಸಿಯೆ
ಸರ್ವ ದೇವರ್ಕಳ ಮಧ್ಯದೊಳಿರಿಸಿ
ಸರ್ವ ವೇದಂಗಳ ಶಿರದೊಳು ಧರಿಸಿಯೆ
ಸರ್ವವ ಕಾಲಗೆ ನಿರ್ವಹಿಸುತಿಹಳು 7
ಅಂಗಳದೊಳಗಿಹ ಮಂಗಳ ಮಹಿಮಗೆ
ರಂಗುವಲ್ಲಿಯನಿಕ್ಕಿ ಶೃಂಗಾರವಾಗಿ
ಸಾಂಗ್ಯದೊಳಿಹ ಒಂದು ಮಂಗಳ ಬರೆದರೆ
ಬಂಗಾರ ಮನೆಯನ್ನು ತೋರುವಳಿವಳು 8
ಮೂಲದ ಮೃತ್ತಿಕೆ ಮೂಲ ಪಣೆಯೊಳಿಟ್ಟು
ಕಾಲದಿ ಸ್ನಾನವ ಮಾಡಿದ ನರರು
ಭಾಳವಾಗಿಹ ಅಘರಾಶಿಯನೆಲ್ಲವ
ಚಾಳಿಸಿ ಕಳೆವರು ಕಾಲನ ಗೆಲಿದು 9
ತನ್ನ ಕಾಷ್ಟವ ತಂದು ಚಿನ್ನದಿ ಸುತ್ತಿಸಿ
ಕರ್ಣದಿ ಧರಿಸಿದ ಮನುಜರಿಗೆಲ್ಲ
ಉನ್ನತ ಪದವಿಯ ತೋರುವೆನೆನುತಲೆ
ಪನ್ನಗಶಯನಗೆ ಪ್ರೀತಿಯಾಗಿಹಳು 10
ಉತ್ತಮವಾಗಿಹ ಕಾರ್ತಿಕ ಮಾಸದಿ
ಅರ್ತಿಯಿಂದಲೆ ನಲಿನಲಿಯುತ್ತ ದೇವಿಯ
ಕರ್ತನ ಕೀರ್ತನೆ ರಚಿಸುವ ಮನದಿ 11
ಬ್ರಾಹ್ಮಿ ಮುಹೂರ್ತದಿ ಸ್ನಾನ ತರ್ಪಣವನ್ನು
ನಿರ್ಮಲ ತೀರದಿ ತಿದ್ದಿಯೆ ಕೊಂಡು
ಧರ್ಮಕ್ಕೆ ಯೋಗ್ಯಳ ಪೂಜೆಯ ಮಾಡಲು
ಕರ್ಮ ಬಂಧಗಳೆಲ್ಲ ಕಡಿದುಕೊಳುವುದು 12
ಸಾಯಂಕಾಲದಿ ದೀವಿಗೆ ಹಚ್ಚಲು
ಮಾಯಗಳೆಲ್ಲವು ಮರುಗಿ ಪೋಗವುವು
ದಾಯವಾಗಿಯೆ ಸುರರಾಯನೊಳರ್ಥವ
ಬೇವಿನವರು ಕಂಡು ಹೊರಸಾರುತಿಹರು 13
ಸರ್ವದಾನಗಳನ್ನು ಸರ್ವಪೂಜೆಗಳನ್ನು
ಸರ್ವರು ಋಷಿ ಪಿತೃ ತರ್ಪಣಗಳನು
ಸರ್ವಥಾ ತುಳಸಿಯ ತಪ್ಪಿಸಬೇಡೆಂದು
ನಿರ್ವಾಹವಾಗಿಯೆ ಶ್ರುತಿಯು ಪೇಳಿದುದು 14
ಅಂಗದೊಳಗಿಹ ಮಂಗಳ ಮಹಿಮಗೆ
ಸಾಂಗ್ಯದೊಳಿದನು ಪಠಿಸಿ ಪೇಳಿದರೆ
ಗಂಗೆ ಗೋದಾವರಿ ತುಂಗಭದ್ರೆಯ ಮಿಂದು
ರಂಗನ ಕ್ಷೇತ್ರವ ನೋಡಿದ ಫಲವು 15
ಅಂಗಳ ತುಳಸಿಯ ದಿನ ದಿನದಿ ತಾವೆದ್ದು
ಹಿಂಗದೆ ನೋಳ್ಸ ಶ್ರೀರಂಗನ ಭಕ್ತರಿಗೆ
ಬಂಗಾರಗಿರಿವಾಸ ವರಾಹತಿಮ್ಮಪ್ಪನ
ಮಂಗಳಮೂರ್ತಿಯ ನೋಡಿದ ಫಲವು 16