ಆರಾಧನೆ ಪರಮಾನಂದ ಪ
ತಾರಾನಾಥ ಕುಲೋದ್ಭವ ಕೃಷ್ಣನ ಅ.ಪ
ಘೋರವು ಈ ಸಂಸಾರವೆನ್ನುವುದು
ದೂರಿನ ನುಡಿಯಿದು ಬಾಳುವಗೆ
ನೂರು ವರುಷಗಳ ಮೀರಿ ಜೀವಿಸಲು
ಕೋರಿಕೆ ಬರುವುದು ಧೀರ ಜನರಿಗೆ 1
ನಿರ್ಮಲ ದೇಹವು ನಿರ್ಮಲ ಹೃದಯವು
ನಿರ್ಮಲ ನಡೆನುಡಿ ಕರ್ಮಗಳು
ಮರ್ಮಜ್ಞರ ಮಾರ್ಗಗಳಲಿ ಸ್ವೋಚಿತ
ಧರ್ಮಗಳಲಿ ವಿಶ್ವಾಸವಿರುವವರಿಗೆ 2
ಅನ್ನವಿರುವವರಿಗೆ ತಿನ್ನಲಾಗದು
ತಿನ್ನಬಲ್ಲವರಿಗೆ ಅನ್ನವು ಸಿಗದು
ಘನ್ನ ಮಹಿಮನ ಪ್ರಸನ್ನತೆಯಿಂದಲಿ
ಅನ್ನ ಪಡೆದು ತಿನ್ನಲು ಬಲ್ಲವರಿಗೆ 3