ಇಂದಿರೆ ಇಂದುವದನೇ ಸರಸಿಜಸದನೇ
ನಿಂದಿತ ಜನಸೂದನೆ ಪ
ವಂದಿಸುವೆನೆ ಅರವಿಂದಗಂಧಿನಿ
ಮಂದಿರದಲಿ ಗೋವಿಂದನ ತೋರಿಸೆ ಅ.ಪ.
ಮೂಲೋಕಮಾತೆ ವಿಖ್ಯಾತೆ ಕೈವಲ್ಯದಾತೆ
ಕಾಲ ದೇಶದಿ ವ್ಯಾಪಿತೆ ಭಜಕರಪ್ರೀತೆ
ಶೀಲೆ ಸಂಪೂರ್ಣ ಗುಣವ್ರಾತೇ
ಫಾಲನಯನ ತ್ರಿದಶಾಲಯ ಪ್ರಮುಖರ
ಪಾಲಿಸುತಿಹೆ ಮಂದಜಾಲಜನಕೆ ರಮೇ
ಶ್ರೀಲತಾಂಗಿ ನಿನ್ನಾಳುಗಳೊಳು ಹರಿ
ಲೀಲೆಯ ಮನದಲಿ ಅಲೋಚನೆ ಕೊಡೆ 1
ಲೋಕನಾಯಕಿ ಲಕುಮಿ ಶ್ರೀ ಸಾರ್ವ ಭೌಮೆ
ಶೋಕರಹಿತ ಸುನಾಮೆ ನಾಕಜವನಧಿ ಸೋಮೆ ದೇವಲಲಾಮೆ
ಸಾಕಾರವಂತೆ ಗುಣ ಸÉ್ತೂೀಮೆ
ನೀ ಕರುಣಿಸಿ ಅವಲೋಕಿಸಿ ಎನ್ನಯ
ಕಾಕುಮತಿಯ ಕಳೆದೇಕಾಂತದಿ ನಿತ್ಯ
ಏಕ ಮನದಿ ಹರಿ ಶ್ರೀ ಕರಪದಧ್ಯಾನ
ನೀ ಕರುಣಿಸು ನಿರಾಕರಿಸದಲೆ 2
ಜಾತರಹಿತ ಜಯವಂತೆ ದೈತ್ಯಕೃತಾಂತೆ
ಸೀತಾಂಶುಕೋಟಿ ಮಿಗೆಕಾಂತೆ
ಪಾತಕದೂರೆ ನಿಜಪಂಥೆ ನಿತ್ಯಾ ನಿಶ್ಚಿಂತೆ
ನೀತದೂರಾದಿ ಮಧ್ಯಾಂತೆ
ಪುರುಹೂತ ಮುಖಾವರ
ವ್ರಾತ ವಿನುತೆ ಅತಿಪ್ರೀತಿಯಿಂದಲಿ ನಮ್ಮ
ವಾತಜನಕ ಜಗನ್ನಾಥ ವಿಠಲನ
ಮಾತು ಮಾತಿಗೆ ನೆನೆವಾತುರ ಮನ ಕೊಡೇ 3