ವೀಣೆ ಧರಿಸಿದ ಕಾರಣೇನೊ ಹನುಮಾ
ಜಾಣತನವಿದು ಏನು ಪೇಳೊ ಬಲಭೀಮ ಪ.
ತ್ರೇತೆಯಲಿ ಶ್ರೀ ರಾಮದಾಸತ್ವ ಚರಿಸಿದುದು
ಖ್ಯಾತಿ ಬರಲಿಲ್ಲೆಂದು ಮನದಿ ತಿಳಿದೂ
ಪ್ರೀತಿಯಿಂದಲಿ ಕೃಷ್ಣನಂಘ್ರಿ ಗುಪ್ತದಿ ಭಜಿಸಿ
ನೀ ತಪೋನಿಧಿ ಎನಿಸಿ ಮುನಿಯಾದ ಮಹಿಮಾ 1
ಮೂರು ಅವತಾರದಲಿ ತೋರದಂತ್ಹರಿ ದಾಸ್ಯ
ಆರಾಧಿಸುತ ಮೀಸಲಾಗಿ ಚಲಿಸೇ
ಧೀರಭಕ್ತರು ಬಯಲಿಗೆಳೆದು ಖ್ಯಾತಿಯ ಪಡೆಯೆ
ತೋರದಂತಾಗೆ ಬೇಗನೆ ದಾಸ್ಯ ವಹಿಸೀ 2
ದಾಸರನುಭವಿಪ ಆನಂದ ನೋಡುತ ಭಾರ
ತೀಶ ನೀ ಮೊದಲು ದಾಸನು ಎನಿಸಲು
ವಾಸುಕೀಶಯನ ಗೋಪಾಲಕೃಷ್ಣವಿಠ್ಠಲಗೆ
ದಾಸನಾಗುತ ವೀಣೆ ಪುಸ್ತಕವ ಪಿಡಿದಿಯಾ 3