ಇರಬೇಕು ನಿಂದಕರು ಸಜ್ಜನರಿಗೆ ಪ
ದುರಿತ ರಾಶಿಗಳ ಪರಿಹರಿಸಲೋಸುಗ ಅ.ಪ.
ಕಲುಷ ಕರ್ಮವ ಮಾಡೆ
ಕಳೆವರಿನ್ನಾರೆಂದು ಕಮಲಭವನು
ತಿಳಿದು ನಿರ್ಮಿಸಿದವನಿಯೊಳಗೆ ನಿಂದಕರ
ಕಲುಷರನ ಮಾಡಿ ತನ್ನವರ ಸಲಹುವ 1
ದಿವಿಜರಿಳೆಯೊಳಗೆ ಜನ್ಮಗಳೊಲ್ಲೆವೆಂದಬ್ಜ
ಭವಗೆ ಮೊರೆಯಿಡಲು ವರವಿತ್ತನಂದು
ಕರ್ಮ ಮಾಡಿದರು ಸರಿಯೆತ
ನ್ನವನೆನಿಸದವಗೆ ತಜ್ಜನ್ಯ ಫಲ ಬರಲೆಂದು 2
ಮಾನವಾಧಮ ಜನರು ನೋಡಿ ಸಹಿಸದಲೆ
ಹೀನ ಮತಿಯಿಂದ ಮಾತುಗಳಾಡಲು
ಭಾನು ಮಂಡಲಕೆ ಮೊಗವೆತ್ತಿ ಉಗುಳಿದರೆ
ನ್ನಾನನವೆ ತೊಯ್ವುದಲ್ಲದರ್ಕಗೇನಪಮಾನ 3
ಮಲವ ತೊಳೆವಳು ತಾಯಿ ಕೈಗಳಿಂದಲಿ ನಿತ್ಯ
ತೊಳೆವ ನಿಂದಕ ತನ್ನ ನಾಲಗಿಂದ
ಬಲು ಮಿತ್ರನಿವನೆಂದು ಕರೆದು ಮನ್ನಿಸಬೇಕು
ಹಲವು ಮಹ ಪಾಪಗಳ ಕಳೆದು ಪುಣ್ಯವನೀವ 4
ಅನುಭವಿಪ ದುಷ್ಕರ್ಮಗಳ ಜನ್ಯ ಫಲವು ತ
ನ್ನಣುಗರಿಗೆ ಅಪವಾದ ರೂಪದಿಂದ
ಉಣಿಸಿ ಮುಕ್ತರ ಮಾಡಿ ಸಂತೈಪ ನರಕ ಯಾ
ತನೆಗಳವರಿಗೆ ಇಲ್ಲದುದರಿಂದ ಎಂದೆಂದೂ 5
ಮನುಜಾಧಮರಿಗೆ ಹರಿದಾಸರಲಿ ದ್ವೇಷ
ವೆನಿಪ ಸಾಧನವೆ ನಿಸ್ಸಂದೇಹವು
ಅನುತಾಪ ಬಿಡದೆ ಹರುಷಿತರಾಗಿ ನಿಷ್ಪ್ರಯೋ
ಜನದಿ ಹರಿಪದಾಬ್ಜ ಭಜಿಪ ಭಜಕರಿಗೆ 6
ಲೋಕದೊಳು ನಿರ್ಮಿಸಿದನಿರ್ವರನು ಹರಿ ತಾನು
ಭೂ ಕೋವಿದರ ಮಲವು ಪೋಗಲೆಂದು
ಶ್ರೀ ಕರಾರ್ಚಿತ ಜಗನ್ನಾಥವಿಠಲ ಗ್ರಾಮ
ಸೂಕರರು ನಿಂದಕರು ಕರುಣಾಳು ಇಳೆಯೊಳಗೆ 7