(ಈ) ಯತಿವರ್ಯರು
ಶ್ರೀ ವ್ಯಾಸರಾಯರ ಸ್ತುತಿ
ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ
ದುರುಳ ವಾದಿಗಳನ್ನು ಮರುಳು ಮಾಡೋರನ್ನ
ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ
ಧರಣಿ ಸುರರ ಪರಿವೃಢರ ಸುನಿಕರಕೆ
ಪರಿಪರಿಯಲಿ ಉಪದೇಶಿಸುತಿಪ್ಪಗೆ 1
ಕನಕ ಕಶಿಪುತನಯನ ಘನ ಅಂಶದಿ
ಫಣಿಗಣ ರಮಣನಾವೇಶದಿ ಪೊಳೆಯುತ
ದಿನದಿನದಲಿ ಹರಿಮನ ತಣಿಸುತಲಿಹ
ಘನ ಮಹಿಮನೆ ಶ್ರೀ ಯತಿಕುಲತಿಲಕಾ 2
ಉದ್ದಂಡ ವಿತಂಡಕೆ
ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ
ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ
ಷಂಡಗಳನೆ ಖಂಡಿಸುತಿಹ ಯತಿಯೆ 3
ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ
ಬ್ರಹ್ಮಜನಕ ನರಸಿಂಹ ಮೂರುತಿಯ ಹೃ-
ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ
ಹೃದಯಾಂಬುಧಿಯೊಳು ಮೆರೆವಗೆ 4
ದಶದಿಶೆಯಲಿ ದಶರಥಸುತ ಮಹಿಮೆಯ
ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ
ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ
ವಸುಧಿಯೊಳಗೆ ಸುಕರ ಸುಚರಿತೆಗೆ 5
ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು
ನಲಿಯುತ ಕುಣಿಕುಣಿದಾಡುತಲಿಪ್ಪನು
ಥಳಥಳಿಸುವ ರಾಮ ವೇದವ್ಯಾಸರು ನಿಮ-
ಗಿಳೆಯೊಳಮೂಲ್ಯ ಪ್ರಸಾದವನೀವರು 6
ಅಡಿಗಡಿಗತಿ ದೃಢತರ ಯುಕ್ತಿಗಳಿಂದ
ಸಡಗರದಿಂದಲಿ ಬಿಡದೆ ನುಡಿಯುತ
ನಡದದ್ವೈತದಡವಿಯೊಳಗೆ ಪೊಕ್ಕು
ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7
ಶ್ರೀದವಿಠಲಗತಿ ಪ್ರೀಯರಾದ ಶ್ರೀ-
ಪಾದರಾಯರಲಿ ಓದಿ ಗ್ರಂಥಗಳ
ವಾದಿರಾಜ ವಿಜಯೀಂದ್ರ ಪ್ರಮುಖರಿಗೆ
ಆದರದಲಿ ಪಾಠ ಹೇಳುತಲಿಪ್ಪಗೆ 8